ಮೈಸೂರು: ದಸರಾ ಗಜಪಡೆಯ ಸಮ್ಮುಖದಲ್ಲಿ ಇಂದು ಕುಶಾಲತೋಪು ಸಿಡಿಸುವ ಮೊದಲ ಹಂತದ ತಾಲೀಮು ನಡೆಸಿದ್ದು, ತಾಲೀಮು ಯಶಸ್ವಿಯಾಗಿದೆ. ಗಜಪಡೆಯ 14 ಆನೆಗಳು ಕೂಡ ಇಂದಿನ ತಾಲೀಮಿನಲ್ಲಿ ಭಾಗಿಯಾಗಿವೆ. ಯಾವುದೇ ಆನೆ ಶಬ್ದಕ್ಕೆ ಬೆಚ್ಚಿಲ್ಲ ಎಂದು ಡಿಸಿಎಫ್ ಡಾ ಐ ಬಿ ಪ್ರಭುಗೌಡ ಮಾಹಿತಿ ನೀಡಿದ್ದಾರೆ.
ದಸರಾ ಗಜಪಡೆ ಮತ್ತು ಅಶ್ವದಳಗಳ ಸಮ್ಮುಖದಲ್ಲಿ ಇಂದು ಏರ್ಪಡಿಸಲಾಗಿದ್ದ ಮೊದಲ ಹಂತದ ಕುಶಾಲತೋಪು ಸಿಡಿಸುವ ತಾಲೀಮಿನ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಏಕಲವ್ಯ ಮೊದಲ ಬಾರಿ ಆಗಮಿಸಿದ್ದರೂ ಬೆಚ್ಚದೇ ನಿಂತಿತ್ತು. ಎಲ್ಲಾ ಆನೆಗಳ ಆರೋಗ್ಯ ಚೆನ್ನಾಗಿದೆ. ಗಜಪಡೆಯ 14 ಆನೆಗಳು ಕೂಡ ಇಂದಿನ ತಾಲೀಮಿನಲ್ಲಿ ಭಾಗಿಯಾಗಿವೆ. ಕುಶಾಲತೋಪು ಸಿಡಿಸುವ ಮೊದಲ ಹಂತದ ತಾಲೀಮು ಯಶಸ್ವಿಯಾಗಿದೆ. ಇನ್ನೂ ಎರಡು ಬಾರಿ ಕುಶಾಲತೋಪು ಸಿಡಿಸುವ ತಾಲಿಮು ನಡೆಸುತ್ತೇವೆ ಎಂದರು.
ಇನ್ನು ಶ್ರೀರಂಗಪಟ್ಟಣದ ದಸರಾಗೆ ಆನೆಗಳ ಆಯ್ಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಮಹೇಂದ್ರ, ಹಿರಣ್ಯ, ಲಕ್ಷ್ಮಿ ಆನೆಗಳನ್ನು ಶ್ರೀರಂಗಪಟ್ಟಣ ದಸರಾಗೆ ಕಳುಹಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.ಎಲ್ಲಾ ಆನೆಗಳ ಸಾಮರ್ಥ್ಯ ಪರೀಕ್ಷೆ ಮಾಡಿ ಮೂರು ಆನೆಗಳನ್ನು ಗುರುತಿಸಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಇದನ್ನು ಅಂತಿಮಗೊಳಿಸುವ ಜವಾಬ್ದಾರಿ ಮೇಲ್ಮಟ್ಟದ ಅಧಿಕಾರಿಗಳಿಗೆ ಸೇರಿದೆ.ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಸಾಗಲಿರುವ ನೌಪತ್ ಆನೆ, ನಿಶಾನೆ ಆನೆಗಳನ್ನು ಸದ್ಯದಲ್ಲೇ ಆಯ್ಕೆ ಮಾಡುತ್ತೇವೆ ಎಂದಿದ್ದಾರೆ.
ಇದೇ ವೇಳೆ ಮೈಸೂರು ನಗರ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಮುತ್ತುರಾಜ್ ಮಾತನಾಡಿ, ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಗಜಪಡೆ ಹಾಗು ಅಶ್ವಾರೋಹಿದಳದ ಸಮ್ಮುಖದಲ್ಲಿ ನಡೆಸಿದ ಮೊದಲ ಹಂತದ ಕುಶಾಲತೋಪು ಸಿಡಿಸುವ ತಾಲೀಮು ಯಶಸ್ವಿಯಾಗಿದೆ. ಅಶ್ವಾರೋಹಿದಳದ 35 ಕುದುರೆಗಳು ಹಾಗು ಸಿಬ್ಬಂದಿಗಳ ಜೊತೆಗೆ ನಗರ ಸಶಸ್ತ್ರ ಮೀಸಲು ಪಡೆಯ 30 ಸಿಬ್ಬಂದಿಗಳು ಕುಶಾಲತೋಪು ಸಿಡಿಸುವ ತಾಲೀಮಿನಲ್ಲಿ ಭಾಗಿಯಾಗಿದ್ದಾರೆ. ಸಿಡಿಮದ್ದಿನ ಶಬ್ದಕ್ಕೆ ಕುದುರೆಗಳು ವಿಚಲಿತವಾಗಿಲ್ಲ.ಎಲ್ಲಾ ಕುದುರೆಗಳು ಆತ್ಮಸ್ಥೈರ್ಯ ಪ್ರದರ್ಶಿಸಿವೆ ಎಂದು ಹೇಳಿದರು.