ಬೆಂಗಳೂರು, ಜ 11: ಕರ್ನಾಟಕದ ವಿವಿಧ ಕಡೆಗಳಿಂದ ಅಯೋಧ್ಯೆಗೆ 11 ವಿಶೇಷ ರೈಲುಗಳನ್ನು ಫೆಬ್ರವರಿ ತಿಂಗಳಿನಿಂದ ಆರಂಭಿಸಲು ಭಾರತೀಯ ರೈಲ್ವೆ ಮುಂದಾಗಿದೆ. ಈ ಪೈಕಿ ಮೂರು ರೈಲುಗಳು ಬೆಂಗಳೂರಿನಿಂದ, ತಲಾ ಎರಡು ಹುಬ್ಬಳ್ಳಿ, ಮೈಸೂರು ಮತ್ತು ಮಂಗಳೂರಿನಿಂದ, ತಲಾ ಒಂದು ರೈಲು ಶಿವಮೊಗ್ಗ ಮತ್ತು ಬೆಳಗಾವಿಯಿಂದ ಹೊರಡಲಿವೆ ಎಂದು ನೈಋತ್ಯ ರೈಲ್ವೆಯ ಉನ್ನತ ಮೂಲಗಳು ತಿಳಿಸಿವೆ.
ಆನ್ಲೈನ್ ಟಿಕೆಟ್ಗೆ ಮಾತ್ರ ಅವಕಾಶ
ಅಯೋಧ್ಯೆಗೆ ಸಂಚರಿಸಲಿರುವ ರೈಲುಗಳನ್ನು ಐಆರ್ಸಿಟಿಸಿ ನಿರ್ವಹಿಸಲಿದೆ. ಈ ರೈಲು ಟಿಕೆಟ್ಗಳನ್ನು ಆನ್ಲೈನ್ನಲ್ಲಿ ಮಾತ್ರ ಕಾಯ್ದಿರಿಸಬಹುದಾಗಿದೆ. ಇವು ಸಾಮಾನ್ಯ ರೈಲುಗಳಾಗಿರುವುದಿಲ್ಲ. ಕೌಂಟರ್ನಲ್ಲಿ ಯಾವುದೇ ಟಿಕೆಟ್ಗಳನ್ನು ನೀಡಲಾಗುವುದಿಲ್ಲ. ಹಾಗೆಯೇ ಯಾವುದೇ ಕೊನೆಯ ಕ್ಷಣದ ಬುಕಿಂಗ್ಗಳು ಇರುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾದ ಬಳಿಕ ಒಂದು ತಿಂಗಳ ಒಳಗಾಗಿ ರೈಲುಗಳು ಸಂಚಾರ ಆರಂಭಿಸುವ ನಿರೀಕ್ಷೆ ಇದೆ.
ರೈಲ್ವೆಯು ಪ್ರಸ್ತುತ ಅಯೋಧ್ಯಾ ಧಾಮ್, ಅಯೋಧ್ಯಾ ಕಂಟೋನ್ಮೆಂಟ್ ಮತ್ತು ಸಲಾರ್ಪುರ ನಿಲ್ದಾಣಗಳಲ್ಲಿನ ಯಾರ್ಡ್ಗಳನ್ನು ಮರುರೂಪಿಸುತ್ತಿದೆ. ಹೀಗಾಗಿ ಈ ಸ್ಥಳಗಳಿಂದ ಬೆಂಗಳೂರಿಗೆ ತೆರಳುವ ಎರಡು ರೈಲುಗಳನ್ನು ಬೇರೆಡೆಯಿಂದ ಸಂಚರಿಸುವಂತೆ ಮಾಡಲಾಗಿದೆ. ಯಾರ್ಡ್ ಪುನರ್ ನಿರ್ಮಾಣ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದೆ.
ಅಯೋಧ್ಯೆಗೆ ರೈಲುಗಳನ್ನು ಆರಂಭಿಸಿದ ನಂತರ, ಐಆರ್ಸಿಟಿಸಿಯು ಕರ್ನಾಟಕ ಭಾರತ್ ಗೌರವ್ ಯಾತ್ರಾ ರೈಲುಗಳನ್ನು ನಿಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ.