ಬೆಂಗಳೂರು ಡಿ.28: ರಾಜ್ಯ ಸರ್ಕಾರದ ಐದನೇ ಗ್ಯಾರಂಟಿ ‘ಯುವನಿಧಿ’ ಯೋಜನೆಗೆ ಚಾಲನೆ ನೀಡಿದ ಎರಡನೇ ದಿನವಾದ ಬುಧವಾರ ಕೇವಲ 2032 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಮೊದಲ ದಿನ ನಿರೀಕ್ಷಿತ ಮಟ್ಟದಲ್ಲಿ ಅರ್ಜಿಗಳು ಸಲ್ಲಿಕೆಯಾಗಿರಲಿಲ್ಲ.
ಈ ಯೋಜನೆಗೆ 2023ನೇ ಇಸವಿಯಲ್ಲಿ ಪದವಿ, ಡಿಪ್ಲೊಮಾ ಉತ್ತೀರ್ಣರಾಗಿ ಆರು ತಿಂಗಳಿಂದ ಉದ್ಯೋಗ ಲಭ್ಯವಾಗದೆ ಇರುವವರು ನೋಂದಣಿ ಮಾಡಲು ಅರ್ಹರು ಎಂದು ಸರ್ಕಾರ ಹೇಳಿದ್ದರೂ ಮಾಹಿತಿ ಕೊರತೆಯಿಂದಲೋ ಏನೋ ಅದಕ್ಕೂ ಹಿಂದಿನ 2021-22ನೇ ಸಾಲಿನಲ್ಲಿ ಪದವಿ, ಡಿಪ್ಲೊಮಾ ಪೂರೈಸಿರುವವರು ಕೂಡ ಅರ್ಜಿ ಸಲ್ಲಿಸುತ್ತಿರುವುದಾಗಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಡಿ.27ರ ಸಂಜೆ 6 ಗಂಟೆ ವರೆಗೆ ಒಟ್ಟು 2032 ಅಭ್ಯರ್ಥಿಗಳು ಯುವನಿಧಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಈ ಮಧ್ಯೆ, ಅರ್ಹರಲ್ಲದವರೂ ನೋಂದಾಯಿಸುತ್ತಿದ್ದಾರೆ. 2021-22ನೇ ಸಾಲಿನಲ್ಲಿ ಪಾಸಾದವರು ಯೋಜನೆಗೆ ಅರ್ಹರಲ್ಲದಿದ್ದರೂ ಅರ್ಜಿ ಸಲ್ಲಿಸುತ್ತಿದ್ದಾರೆ. ಅಂತಹವರ ಅರ್ಜಿಗಳನ್ನು ತಿರಸ್ಕೃತಗೊಳ್ಳುತ್ತಿವೆ ಎಂದು ತಿಳಿಸಿದ್ದಾರೆ.