ಹಾಸನ, ಸೆ.15: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಯುವಕರನ್ನು ಬಡಾವಣೆ ಪೊಲೀಸರು ಬಂಧಿಸಿದ್ದಾರೆ. ದುದ್ದ ಹೋಬಳಿ ಹಂಪನಹಳ್ಳಿಯ ಶಶಾಂಕ್, ಕುವೆಂಪು ನಗರದ ಸಿ.ಸಿ.ಸಚಿನ್, ಶಾಂತಿಗ್ರಾಮ ಹೋಬಳಿ ಹೊಂಗೆರೆ ರಸ್ತೆಯ ದಿಲೀಪ್ ಬಂಧಿತ ಆರೋಪಿಗಳು. ಬಂಧಿತರ ಬಳಿ ಇದ್ದ 1 ಕೆಜಿ 700 ಗ್ರಾಂ ಹಸಿ ಗಾಂಜಾ, 56 ಗ್ರಾಂ ಒಣ ಗಾಂಜಾ, 3 ಮೊಬೈಲ್, ಒಂದು ಬೈಕ್ ಜಪ್ತಿ ಮಾಡಲಾಗಿದೆ. ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳು ದೊಡ್ಡಹೊನ್ನೇನಹಳ್ಳಿ ರಸ್ತೆಯ ರೈಲ್ವೆ ಟ್ರ್ಯಾಕ್ ಹಿಂಭಾಗ ಗಾಂಜಾ ಸೊಪ್ಪು ಮಾರುತ್ತಿದ್ದರು. ಈ ವೇಳೆ ದಾಳಿ ನಡೆಸಿದ ಬಡಾವಣೆ ಪೊಲೀಸ್ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿ ಗಾಂಜಾ ಸೊಪ್ಪು ಇತರೆ ವಸ್ತುಗಳನ್ನು ವಶಕ್ಕೆ ಪಡೆದರು.
ತೊಗರಿ ಬೆಳೆಯಲ್ಲಿ ಗಾಂಜಾ ಬೆಳೆ: ಇನ್ನು ಮತ್ತೊಂದೆಡೆ ತೊಗರಿ ಬೆಳೆಯಲ್ಲಿ ಅಕ್ರಮವಾಗಿ ಗಾಂಜಾ ಬೆಳೆದ ದುಷ್ಕರ್ಮಿಗಳನ್ನು ಬಂಧಿಸಲಾಗಿದೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸಂಗಾಪುರ ಗ್ರಾಮದ ಹೊಲವೊಂದರಲ್ಲಿ ತೊಗರಿ ಬೆಳೆ ನಡುವೆ ಗಾಂಜಾ ಗಿಡಗಳನ್ನು ಬೆಳೆಯಲಾಗಿತ್ತು. ಒಟ್ಟು 7 ಕಿಲೋ ಗಾಂಜಾ ಬೆಳೆಯನ್ನು ಅಬಕಾರಿ ಇಲಾಖೆ ಸಿಬ್ಬಂದಿ ಜಪ್ತಿ ಮಾಡಿದ್ದಾರೆ. ತೊಗರಿ ಬೆಳೆ ಜೊತೆ ಬೆಳೆದಿದ್ದ 48 ಸಾವಿರ ರೂ. ಮೌಲ್ಯದ ಗಾಂಜಾ ಗಿಡಗಳನ್ನು ಜಪ್ತಿ ಮಾಡಲಾಗಿದೆ. ಜಮೀನಿನ ಮಾಲೀಕ ವಿನೋದ ಪಾಂಡುನನ್ನು ಅಬಕಾರಿ ಸಿಬ್ಬಂದಿ ಬಂಧಿಸಿದ್ದಾರೆ. ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.