ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶೆ ಬಿ.ಎಸ್.ಭಾರತಿ ಮಾಹಿತಿ
ಪ್ರತಿನಿಧಿ ವರದಿ ಚಾಮರಾಜನಗರ
ಜಿಲ್ಲೆಯ ನ್ಯಾಯಾಲಯಗಳಲ್ಲಿ ಮಾ.16ರಂದು ನಡೆದ ಲೋಕ ಅದಾಲತ್ ನಲ್ಲಿ ಒಟ್ಟು 31,267 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶೆ ಬಿ.ಎಸ್.ಭಾರತಿ ತಿಳಿಸಿದರು.
ನ್ಯಾಯಾಲಯದಲ್ಲಿದ್ದ ಪ್ರಕರಣಗಳ ಪೈಕಿ 2910 ಪ್ರಕರಣಗಳನ್ನು ಅದಾಲತ್ ನಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಅವುಗಳಲ್ಲಿ ಸುಮಾರು 1,830 ಪ್ರಕರಣಗಳು ಇತ್ಯರ್ಥವಾದವು. ಹಾಗೆಯೇ ವ್ಯಾಜ್ಯಪೂರ್ವ ಪ್ರಕರಣಗಳ ಪೈಕಿ ಕೈಗೆತ್ತಿಕೊಂಡಿದ್ದ 30,127 ಪ್ರಕರಣಗಳಲ್ಲಿ 29,437 ಪ್ರಕರಣಗಳು ಇತ್ಯರ್ಥಗೊಂಡವು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವ್ಯಾಜ್ಯ ಪೂರ್ವ ಪ್ರಕರಣಗಳಾದ 29437, ಸಿವಿಲ್ 195, ಕ್ರಿಮಿನಲ್ 1635 ಪ್ರಕರಣಗಳನ್ನು ಖುಲಾಶೆಗೊಳಿಸಲಾಯಿತು ಎಂದು ತಿಳಿಸಿದರು.
ನ್ಯಾಯಾಲಯದಲ್ಲಿ ಬಾಕಿಯಿದ್ದ 2910 ಪ್ರಕರಣಗಳಲ್ಲಿ 1830 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಪರಿಹರಿಸಲಾಯಿತು. ಈ ಎಲ್ಲ ಪ್ರಕರಣಗಳಲ್ಲಿ ಸಾಲ ಮರುಪಾವತಿ, ದಂಡ ಹಾಗೂ ಇತರ ವಿಚಾರವಾಗಿ 5.39 ಕೋಟಿ ರೂ. ಇತ್ಯರ್ಥಗೊಂಡ ಮೊತ್ತವಾಗಿದೆ ಎಂದು ಹೇಳಿದರು.
ಚಾಮರಾಜನಗರದ ನ್ಯಾಯಾಲಯದಲ್ಲಿದ್ದ 469, ಯಳಂದೂರಿನಲ್ಲಿದ್ದ 216, ಕೊಳ್ಳೇಗಾಲದಲ್ಲಿದ್ದ 915, ಗುಂಡ್ಲುಪೇಟೆಯಲ್ಲಿದ್ದ 230 ಪ್ರಕರಣಗಳನ್ನು ಹಾಗೂ ಚಾಮರಾಜನಗರ ನ್ಯಾಯಾಲಯದಲ್ಲಿದ್ದ ವ್ಯಾಜ್ಯಪೂರ್ವ 19,406, ಯಳಂದೂರಿನಲ್ಲಿದ್ದ 1962, ಕೊಳ್ಳೇಗಾಲದಲ್ಲಿದ್ದ 4924, ಗುಂಡ್ಲುಪೇಟೆಯಲ್ಲಿದ್ದ 3145 ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥಗೊಳಿಸಲಾಯಿತು ಎಂದರು.
ಪ್ರತೀ ಲೋಕ್ ಅದಾತ್ ಗೂ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗುತ್ತಿದೆ. ಇದಕ್ಕೆಲ್ಲ ವಕೀಲರು, ನ್ಯಾಯಾಲಯ ಸಿಬ್ಬಂದಿ, ಪೊಲೀಸ್, ಕಂದಾಯ, ಕಾರ್ಮಿಕ, ಅಬಕಾರಿ ಇಲಾಖೆಗಳು, ಬ್ಯಾಂಕ್ ಗಳು, ತಂಬಾಕು ನಿಯಂತ್ರಣ ಘಟಕಗಳ ಅಧಿಕಾರಿಗಳ ಮತ್ತು ಕಕ್ಷಿದಾರರ ಸಹಕಾರವೇ ಕಾರಣ.
ಬಹುಮುಖ್ಯವಾಗಿ ಮಾಧ್ಯಮಗಳು ನೀಡಿದ ಸಹಕಾರದಿಂದ ಲೋಕ್ ಅದಾಲತ್ ಯಶಸ್ವಿಯಾಗಿ ನಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಂಡರೆ ಕಕ್ಷಿದಾರರಿಗೆ ಹಣ, ಸಮಯ, ಶ್ರಮ ಉಳಿಯಲಿದೆ. ದೀರ್ಘ ಕಾಲದ ವರೆಗೆ ನ್ಯಾಯಾಲಯಕ್ಕೆ ಅಲೆದಾಡಲು ಮುಕ್ತಿ ದೊರಕಿದಂತಾಗಲಿದೆ ಎಂದು ತಿಳಿಸಿದರು.
ಬಾಕ್ಸ್…
ವರ್ಷದ ಮೊದಲ ಲೋಕ್ ಅದಾಲತ್ ನಲ್ಲಿ ದಾಖಲೆಯ 31,267 ಪ್ರಕರಣಗಳು ಇತ್ಯರ್ಥ : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಶ್ರೀಧರ್ ಅವರು ಮಾತನಾಡಿ, ಜಿಲ್ಲೆಯ ನ್ಯಾಯಾಲಯಗಳಲ್ಲಿ 2023ರ ಆರಂಭದಿಂದ ಡಿಸೆಂಬರ್ ಅಂತ್ಯದವರೆಗೆ ನಡೆದ 4 ಲೋಕ ಅದಾಲತ್ ನಲ್ಲಿ ದಾಖಲಾಗಿದ್ದ ನ್ಯಾಯಾಲಯ ಪ್ರಕರಣ ಹಾಗೂ ವ್ಯಾಜ್ಯಪೂರ್ವ 71,615 ಪ್ರಕರಣಗಳಲ್ಲಿ ಒಟ್ಟು 60,494 ಪ್ರಕರಣಗಳು ಇತ್ಯರ್ಥಗೊಂಡು, 38,52,28.811 ರೂ. ಇತ್ಯರ್ಥಗೊಂಡ ಪ್ರಕರಣಗಳ ಮೊತ್ತವನ್ನು ಪರಿಹಾರ ಒಳಗೊಂಡಿದೆ. ಆದರೆ ಪ್ರಸ್ತುತ 2024ರ ಮಾ.16ರಂದು ನಡೆದ ಪ್ರಥಮ ಲೋಕ್ ಅದಾಲತ್ ನಲ್ಲಿ ದಾಖಲೆಯ 31,267 ಪ್ರಕರಣಗಳು ಇತ್ಯರ್ಥಗೊಂಡು, 8,36,94,539 ರೂ.ಇತ್ಯರ್ಥಗೊಂಡ ಪ್ರಕರಣಗಳ ಮೊತ್ತವನ್ನು ಒಳಗೊಂಡಿದೆ. 2024ರ ವರ್ಷದ ಪ್ರಥಮ ಲೋಕ್ ಅದಾಲತ್ ನಲ್ಲಿ ದಾಖಲೆಯ ಪ್ರಮಾಣದ ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಕೀಲರ ಸಂಘದ ಅಧ್ಯಕ್ಷ ಇಂದುಶೇಖರ್ ಇದ್ದರು.
21ಸಿಎಚ್ಎನ್.1: ಚಾಮರಾಜನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ವ್ಯಾಜ್ಯ ಪೂರ್ವ ಪರಿಹಾರ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ನ್ಯಾಯಾಧೀಶೆ ಬಿ.ಎಸ್.ಭಾರತಿ ಮಾತನಾಡಿದರು.