ಕರ್ನಾಟಕದಿಂದ ಅಯೋಧ್ಯೆಗೆ ಜನವರಿ 22ರ ಬಳಿಕ 60 ದಿನಗಳ ಅವಧಿಯಲ್ಲಿ 35 ಸಾವಿರಕ್ಕೂ ಹೆಚ್ಚು ರಾಮ ಭಕ್ತರು ಪ್ರಯಾಣಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜನವರಿ 31ರಿಂದ ಮಾರ್ಚ್ 25ರ ವರೆಗೆ ರಾಮ ಭಕ್ತರು ಅಯೋಧ್ಯೆಗೆ ಪ್ರಯಾಣ ಮಾಡಲಿದ್ದಾರೆ. ಪ್ರಯಾಣದ ಖರ್ಚು ವೆಚ್ಚವನ್ನು ಅವರೇ ಭರಿಸಲಿದ್ದಾರೆ. ಪ್ರತಿ ರೈಲಿನಲ್ಲೂ 1500 ಜನ ಪ್ರಯಾಣ ಮಾಡಲಿದ್ದು, ಒಟ್ಟು 25 ರೈಲುಗಳ ಮೂಲಕ ಪ್ರಯಾಣ ಮಾಡಲಿದ್ದಾರೆ ಎಂದು ತಿಳಿಸಿದರು.
ರಾಮ ಭಕ್ತರ ಉತ್ಸಾಹಕ್ಕೆ ಅಡ್ಡಿಯಾಗದಂತೆ ರಾಜ್ಯ ಸರ್ಕಾರ ಕೂಡಾ ಸಹಕಾರ ಕೊಡಬೇಕು ಎಂದು ಆಗ್ರಹಿಸಿದ ಅವರು, ಕೋಲಾರ ಫ್ಲೆಕ್ಸ್ ಹರಿದ ಪ್ರಕರಣ, ಹುಬ್ಬಳ್ಳಿಯಲ್ಲಿ ಶ್ರೀಕಾಂತ್ ಪೂಜಾರಿ ಬಂಧನದಂತಹ ಪ್ರಕರಣಗಳು ಕೆಲವು ದೇಶದ್ರೋಹಿ ಚಟುವಟಿಕೆಗಳಿಗೆ ಅವಕಾಶ ಆಗಬಹುದು. ಅಶಾಂತಿ ನಿರ್ಮಾಣವಾಗಲು ಕಾರಣವಾಗಬಹುದು. ಯಾವುದೇ ಸಮಸ್ಯೆ, ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಸರ್ಕಾರ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರು.
ರಾಜ್ಯದ 60 ಕ್ಕೂ ಹೆಚ್ಚು ಪಿವಿಆರ್ಗಳಲ್ಲಿ ಪ್ರಾಣ ಪ್ರತಿಷ್ಠೆ ನೇರ ಪ್ರಸಾರ ಇರಲಿದೆ. ಮಂತ್ರಾಕ್ಷತೆ ವಿತರಣೆಗೆ ಜನರಿಂದ ನಿರೀಕ್ಷೆಗೂ ಮೀರಿ ಸ್ಪಂದನೆ ಸಿಕ್ಕಿದೆ ಎಂದು ವಿಜಯೇಂದ್ರ ತಿಳಿಸಿದರು.