ನಿಗಮ-ಮಂಡಳಿ ಅಧ್ಯಕ್ಷ ಹುದ್ದೆಗೆ ಕಡೆಗೂ ಮೊದಲ ಪಟ್ಟಿ ಆಖೈರುಗೊಂಡಿದ್ದು, ಅಚ್ಚರಿಯೆಂಬಂತೆ 39 ಮಂದಿ ಶಾಸಕರ ಹೆಸರು ಈ ಪಟ್ಟಿಯಲ್ಲಿದೆ. ನಿರೀಕ್ಷಿಸಿದಂತೆ ಕಾರ್ಯಕರ್ತರ ಹೆಸರು ಈ ಪಟ್ಟಿಯಲ್ಲಿ ಇಲ್ಲ. ಮಂಗಳವಾರವೇ ಈ ಪಟ್ಟಿ ಹೈಕಮಾಂಡ್ಗೆ ರವಾನೆಯಾಗಿದ್ದು, ಒಪ್ಪಿಗೆ ದೊರೆತರೆ ಬೆಳಗಾವಿ ವಿಧಾನಮಂಡಲ ಅಧಿವೇಶನಕ್ಕೂ ಮೊದಲೇ ನಿಗಮ-ಮಂಡಳಿ ನೇಮಕ ಆದೇಶ ಹೊರಬೀಳುವ ಸಾಧ್ಯತೆಯಿದೆ. ತನ್ಮೂಲಕ ಹಲವು ಮಾಸಗಳಿಂದ ನಡೆದಿದ್ದ ನಿಗಮ-ಮಂಡಳಿ ನೇಮಕ ಕಸರತ್ತು ಮಂಗಳವಾರ ಪೂರ್ಣಗೊಂಡಿದೆ. ಈ ಪ್ರಕ್ರಿಯೆ ಮುಕ್ತಾಯಗೊಳಿಸಲು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ನಗರಕ್ಕೆ ಆಗಮಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದರು.
ಮೂಲಗಳ ಪ್ರಕಾರ, 25 ಮಂದಿ ಶಾಸಕರು ಹಾಗೂ 15 ಮಂದಿ ಕಾರ್ಯಕರ್ತರನ್ನು ಮೊದಲ ಪಟ್ಟಿಯಲ್ಲಿ ಅಂತಿಮಗೊಳಿಸುವ ಉದ್ದೇಶ ನಾಯಕತ್ವಕ್ಕೆ ಇತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಹಂತದಲ್ಲಿ ಶಾಸಕರನ್ನು ಮಾತ್ರ ನೇಮಕ ಮಾಡಿ, ಲೋಕಸಭಾ ಚುನಾವಣೆ ನಂತರ ಕಾರ್ಯಕರ್ತರನ್ನು ನೇಮಕ ಮಾಡಬೇಕು ಎಂದು ಮಂಡಿಸಿದ ವಾದಕ್ಕೆ ಸುರ್ಜೇವಾಲಾ ಒಪ್ಪಿಗೆ ಸೂಚಿಸಿದರು ಎನ್ನಲಾಗಿದೆ. ಅನಂತರ ನಡೆದ ಮಾತುಕತೆಯ ವೇಳೆ, ಪಟ್ಟಿಯಲ್ಲಿದ್ದ 25 ಶಾಸಕರ ಸಂಖ್ಯೆ ಕ್ರಮೇಣ ಹೆಚ್ಚಿದೆ. ವಾಸ್ತವವಾಗಿ ನಿಗಮ-ಮಂಡಳಿ ನೇಮಕವನ್ನು ಶಾಸಕರಿಗೆ ಶೇ. 30 ಹಾಗೂ ಕಾರ್ಯಕರ್ತರಿಗೆ ಶೇ. 70ರ ಪ್ರಮಾಣದಲ್ಲಿ ಹಂಚಿಕೆ ಮಾಡಬೇಕು ಎಂದು ಹೈಕಮಾಂಡ್ ರಾಜ್ಯ ನಾಯಕತ್ವಕ್ಕೆ ನಿರ್ದೇಶಿಸಿತ್ತು.