ಚಿಕ್ಕಮಗಳೂರು: ಗ್ರಾಹಕರಿಗೆ ನೀಡಿದ ಅಡುಗೆ ಅನಿಲದ ಸಿಲಿಂಡರ್ ಸೋರಿಕೆಯಿಂದ ಸ್ಪೋಟಗೊಂಡಿದ್ದು, ಗ್ರಾಹಕರ ಮನೆಗೆ ವಿತರಿಸಿದ ಅಡುಗೆ ಅನಿಲದ ಸೋರಿಕೆ ಬಗ್ಗೆ ಗ್ರಾಹಕರು ತಿಳಿಸಿದಾಗಲೂ ಅಡುಗೆ ಅನಿಲ ವಿತರಕರು ಅದನ್ನು ಸರಿಪಡಿಸದೆ ಸೇವಾನ್ಯೂನ್ಯತೆ ಎಸಗಿದ್ದರಿಂದ ಅಡುಗೆ ಅನಿಲ ಸ್ಪೋಟಗೊಂಡು ಗ್ರಾಹಕರ ಮನೆಯ ಕಟ್ಟಡ ಸೇರಿದಂತೆ ಅನೇಕ ಪೀಠೋಪಕರಣಗಳು ಹಾನಿಗೊಂಡಿದ್ದವು.
ಗ್ರಾಹಕರಿಗೆ ಈ ಹಾನಿಯನ್ನು ಅಡುಗೆ ಅನಿಲದ ವಿಮಾ ಕಂಪನಿಗಳಾದ ಯುನೈಟೆಡ್ ಇಂಡಿಯಾ ವಿಮಾ ಕಂಪನಿ ಹಾಗೂ ನ್ಯೂ ಇಂಡಿಯಾ ವಿಮಾ ಕಂಪನಿಗಳು ವಿಮಾ ಪರಿಹಾರವನ್ನು ಹಾನಿಯ ಪರಿಹಾರವಾಗಿ ರೂ.4.35 ಲಕ್ಷಗಳನ್ನು, ಪರಿಹಾರವಾಗಿ ರೂ.30,000 ಹಾಗೂ ಪ್ರಕರಣದ ಖರ್ಚು ರೂ.10.000ಗಳನ್ನು ಒಂದು ತಿಂಗಳೊಳಗೆ ನೀಡುವಂತೆ ಆಯೋಗದ ಅಧ್ಯಕ್ಷ ಎನ್.ಆರ್. ಚೆನ್ನಕೇಶವ ಹಾಗೂ ಸದಸ್ಯರಾದ ಡಾ. ಮಂಜುನಾಥ ಎಂ. ಬಮ್ಮಕಟ್ಟಿ ಆದೇಶ ನೀಡಿದ್ದಾರೆ.
ತಪ್ಪಿದಲ್ಲಿ ಶೇ.12ರ ಬಡ್ಡಿಯೊಂದಿಗೆ ಮರುಪಾವತಿಸುವಂತೆ ಚಿಕ್ಕಮಗಳೂರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ನೀಡಿದೆ.
ಗ್ರಾಹಕರ ಪರವಾಗಿ ಎನ್.ಆರ್. ತೇಜಸ್ವಿ ಅವರು ವಾದ ಮಂಡಿಸಿದ್ದರು. ವಿಮಾ ಕಂಪನಿಗಳ ಪರವಾಗಿ ನ್ಯಾಯವಾದಿ ಎಚ್.ಎಲ್. ವಿಶ್ವನಾಥ ಹಾಗೂ ಸಿ.ವಿ. ಹರ್ಷ ವಾದ ಮಂಡಿಸಿದ್ದರು. ಗ್ಯಾಸ್ ಏಜೆನ್ಸಿ ಹಾಗೂ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಪರವಾಗಿ ನ್ಯಾಯವಾದಿಗಳಾದ ಜಿ.ಎಂ. ಜಯಕುಮಾರ್ ಹಾಗೂ ಕೆ.ಎನ್. ಚಂದ್ರಶೇಖರ ವಾದ ಮಂಡಿಸಿದ್ದರು.
———————————————————————–
ದೋಷ ಪೂರಿತ ಟಿ.ವಿ. ಸರಬರಾಜು ಗ್ರಾಹಕರ ವೇದಿಕೆಯಿಂದ ದಂಡ
ಚಿಕ್ಕಮಗಳೂರು: ಆನ್ಲೈನ್ ಮಾರುಕಟ್ಟೆ ಮೂಲಕ ಟಿ.ವಿ. ಖರೀದಿಸಿದ ರಾಘವೇಂದ್ರ ಜಿ. ಎಸ್ ಇವರಿಗೆ ದೋಷಪೂರಿತ ಟಿ.ವಿ. ನೀಡಿದ ಆರ್.ಜಿ.ಕೆ. ಸಿಲಿಕಾನ್ ಫೈನಾನ್ಸ್ ಪ್ರೈವೆಟ್ ಲಿಮಿಟೆಡ್ ಕಂಪನಿಗೆ ಚಿಕ್ಕಮಗಳೂರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದೂರುದಾರರಿಗೆ ಹೊಸ ಟಿ.ವಿ ನೀಡುವಂತೆ ಇಲ್ಲವಾದಲ್ಲಿ ಟಿ.ವಿ.ಗೆ ಗ್ರಾಹಕರು ಪಾವತಿಸಿರುವ ರೂ.19,999 ಗಳನ್ನು ಮರು ಪಾವತಿಸುವಂತೆ ಆದೇಶಿಸಿದೆ.
ದೂರುದಾರರಿಗೆ ಮಾನಸಿಕ ಹಿಂಸೆಯ ಪರಿಹಾರವಾಗಿ 15,000 ರೂ.ಗಳನ್ನು ಹಾಗೂ ಪ್ರಕರಣದ ಖರ್ಚು-ವೆಚ್ಚಕ್ಕಾಗಿ 5,000 ರೂ. ಗಳನ್ನು ಟಿ.ವಿ. ನೀಡಿದ ಕಂಪನಿಯು ಪಾವತಿಸುವಂತೆ ಆಯೋಗದ ಅಧ್ಯಕ್ಷ ಎನ್.ಆರ್. ಚೆನ್ನಕೇಶವ ಹಾಗೂ ಸದಸ್ಯರಾದ ಡಾ. ಮಂಜುನಾಥ ಎಂ. ಬಮ್ಮಕಟ್ಟಿ ಅವರಿದ್ದ ಆಯೋಗವು ಈ ಆದೇಶ ನೀಡಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟರ್ ಮತ್ತು ಸಹಾಯಕ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.