ಪ್ರತಿನಿಧಿ ವರದಿ ಕೊಳ್ಳೇಗಾಲ
ತಾಲೂಕಿನ ಕುಣಗಳ್ಳಿ ಗ್ರಾಮದಲ್ಲಿ 7 ಸೀಳು ನಾಯಿಗಳ ಕಳೇಬರ ಪತ್ತೆಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೇಪಾಳ್ಯ ನಿವಾಸಿ ರಾಜು ಎಂಬಾತನನ್ನು ಬುಧವಾರ ಕೊಳ್ಳೇಗಾಲ ಬಫರ್ ವಲಯದ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಕುಣಗಳ್ಳಿ ಸಮೀಪದ ಅರೆಪಾಳ್ಯ ಹಾಗೂ ಹಿತ್ತಲದೊಡ್ಡಿಗೂ ಮಧ್ಯದಲ್ಲಿರುವ ಸರ್ವೆ ನಂಬರ್ 429ರಲ್ಲಿ ಸೋಮವಾರ 6 ಸೀಳು ನಾಯಿಗಳ ಕಳೇಬರ ಹಾಗೂ ಮಂಗಳವಾರ 1 ಕಳೆಬರಹ ಪತ್ತೆಯಾಗಿದೆ. ಇದರಿಂದ ಎಚ್ಚೆತ್ತ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಎಸಿಎಫ್ ಶಶಿಧರ್, ಆರ್ಎಫ್ಒ ಭರತ್, ಡಿಆರ್ ಎಫ್ ಒ ದೀಪಕ್, ಗಾರ್ಡ್ ನಿಂಗಣ್ಣ ಸೇರಿದಂತೆ ಇತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಪಶು ಇಲಾಖೆಯ ವೈದ್ಯರಿಂದ ಸ್ಥಳದಲ್ಲೇ ಸೀಳುನಾಯಿಗಳ ಕಳೇಬರವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿ, ಮುಂದಿನ ತನಿಖೆ ಕೈಗೊಳ್ಳಲಾಗಿತ್ತು.
ತನಿಖೆ ಕೈಗೊಂಡ ಅರಣ್ಯಾಧಿಕಾರಿಗಳಿಗೆ ಸೀಳುನಾಯಿಗಳ ಹತ್ಯೆಗೆ ಸಂಬಂಧಿಸಿದಂತೆ ಅರೇಪಾಳ್ಯ ಗ್ರಾಮದ ನಿವಾಸಿ ರಾಜು ಎಂಬುವವನ್ನು ಬಂಧಿಸಿದರು. ಕುರಿಗಾಹಿಯಾದ್ದ ಇತನ ಕುರಿಗಳನ್ನು ಚಿರತೆ ಬೇಟೆಯಾಡಿದ್ದರಿಂದ ಆಕ್ರೋಶಗೊಂಡ ಆರೋಪಿಯು ಕುರಿಯ ಮಾಂಸದಲ್ಲಿ ವಿಷ ಬೆರೆಸಿ ಚಿರತೆ ಭೇಟೆಗೆ ಬಳಿ ಸಂಚು ರೂಪಿಸಿದ್ದಾನೆ. ಆದರೆ, ವಿಷಯುಕ್ತ ಮಾಂಸದ ತುಂಡುಗಳನ್ನು ಸೀಳು ನಾಯಿಗಳು ತಿಂದು ಸಾವನಪ್ಪಿವೆ ಎಂದು ಹೇಳಲಾಗುತ್ತಿದೆ.