ಪ್ರತಿನಿಧಿ ವರದಿ ತಿ.ನರಸೀಪುರ
ಲೋಕಸಭಾ ಚುನಾವಣೆ 2024ರ ಹಿನ್ನೆಲೆಯಲ್ಲಿ ಶುಕ್ರವಾರ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಮತದಾನ ನಡೆಯಿತು. ಚಾಮರಾಜನಗರ ಲೋಕಸಭಾ ಕ್ಷೇತ್ರದ ತಿ.ನರಸೀಪುರ ವಿಧಾನ ಸಭಾ ಕ್ಷೇತ್ರದಲ್ಲಿ ಶೇ.74.18ರಷ್ಟು ಮತದಾನವಾಗಿದ್ದು, ಭಾಗಶಃ ಶಾಂತಿಯುತ ಮತದಾನ ನಡೆದಿದೆ.
ಒಟ್ಟು 209547 ಮತದಾರ ಪೈಕಿ 77585 ಪುರುಷರು, 77864 ಮಹಿಳೆ ಮತ್ತು ಇತರೆ 2 ಮತಗಳು ಸೇರಿದಂತೆ 155451 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಕ್ಷೇತ್ರದಲ್ಲಿ ಒಟ್ಟು ಶೇ 74.18ರಷ್ಟು ಮತದಾನವಾಗಿದೆ. ಕಳೆದ ಬಾರಿಗಿಂತ ಹೆಚ್ಚು ಮತದಾನವಾಗಿರುವುದು ವಿಶೇಷವಾಗಿದೆ.
ಶುಕ್ರವಾರ ಬೆಳಗ್ಗೆಯಿಂದ ಮಂದಗತಿಯಲ್ಲಿ ಸಾಗಿದ ಮತದಾನ ಮಧ್ಯಾಹ್ನ ವೇಳೆಗೆ ಹೆಚ್ಚು ಬಿರುಸುಗೊಂಡಿತು. ಮತದಾರರು ಬಿರುಬಿಸಿಲನ್ನು ಲೆಕ್ಕಿಸದೆ ದೇಶದ ಭವಿಷ್ಯಕ್ಕಾಗಿ ಅತ್ಯುತ್ಸಾಹದಿಂದ ಮತದಾನ ಮಾಡಿದ್ದು ಕಂಡುಬಂದಿತು. ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದೆ.
ಕ್ಷೇತ್ರದಲ್ಲಿ 5 ಪಿಂಕ್ , 2 ಯಂಗ್ , 1 ವಿಶೇಷ ಚೇತನ , 25 ವಲ್ನರೇಬಲ್ ಮತ್ತು 35 ಕ್ರಿಟಿಕಲ್ ಬೂತ್ ಗಳು ಸೇರಿದಂತೆ ಒಟ್ಟು 228 ಸ್ಥಾಪನೆ ಮಾಡಿದ್ದು, ಎಲ್ಲ ಬೂತ್ ಗಳಲ್ಲೂ ಶಾಂತಿಯುತ ಮತದಾನ ನಡೆದಿದೆ. 35 ಮೈಕ್ರೋ ಅಬ್ಸರ್ವೇರ್ಸ್ ಮತ್ತು 1400 ಚುನಾವಣಾ ಸಿಬ್ಬಂದಿಗಳು ಕಾರ್ಯ ನಿರ್ವಹಿಸಿದರೆಂದು ತಿಳಿದು ಬಂದಿದೆ.
ನಂಜನಗೂಡು ವಿಧಾನ ಸಭಾ ಕ್ಷೇತ್ರದ ಹದಿನಾರು ಗ್ರಾಮದಲ್ಲಿ ಉಸ್ತುವಾರಿ ಸಚಿವ ಎಚ್. ಸಿ. ಮಹದೇವಪ್ಪ, ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಮತದಾನ ಮಾಡಿದರು. ತುಂಬಲ ಗ್ರಾಮದ ಮತಗಟ್ಟೆಯಲ್ಲಿ ಮಾಜಿ ಶಾಸಕ ಅಶ್ವಿನ್ ಕುಮಾರ್ ಮತಚಲಾಯಿಸಿದರೆ, ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಸ್ವಗ್ರಮವಾದ ಕುರುಬೂರಿನಲ್ಲಿ ಎತ್ತಿನ ಗಾಡಿಯಲ್ಲಿ ಬಂದು ಮಾತಾಚಲಾಯಿಸಿದ್ದು ವಿಶೇಷವಾಗಿತ್ತು.