ಪ್ರತಿನಿಧಿ ವರದಿ ಪಾಂಡವಪುರ
ಬೀದಿ ನಾಯಿಗಳು ದಾಳಿ ನಡೆಸಿ, ಮಹಿಳೆ ಸೇರಿದಂತೆ ಎಂಟು ಮಂದಿಗೆ ಕಚ್ಚಿ ಗಾಯಗೊಳಿಸಿರುವ ಘಟನೆ ಪಟ್ಟಣದಲ್ಲಿ ಮಂಗಳವಾರ ನಡೆದಿದೆ.
ಪಟ್ಟಣದ ನಿವಾಸಿಗಳದ ರಾಜು, ಇಮ್ರಾನ್, ಜಗದೀಶ್, ಲೋಕೇಶ್ ಸೇರಿದಂತೆ ಎಂಟು ಮಂದಿಗೆ ಬೀದಿ ನಾಯಿಗಳು ಕಚ್ಚಿದ್ದು ಸಾರ್ವಜನಿಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಸ್ಥಳೀಯ ನಿವಾಸಿ ರಾಜು ಎಂಬುವರು ಪಟ್ಟಣದ ಬೀರಶೆಟ್ಟಹಳ್ಳಿ ಬಸ್ ಡಿಪ್ಪೋ ಸಮೀಪ ನಡೆದುಕೊಂಡು ಬರುತ್ತಿದ್ದಾಗ, ಏಕಾಏಕಿ ಬೀದಿ ನಾಯಿಗಳು ದಾಳಿ ನಡೆಸಿ, ಜೋರಾಗಿ ಕಚ್ಚಿದೆ.
ಜ್ಯೋತಿಪಣ ಬೀದಿ ನಿವಾಸಿ ಜಗದೀಶ್ ಎಂಬುವರು ಕಾಮನಚೌಕದಲ್ಲಿ ಬರುತ್ತಿದ್ದಾಗ ಅದೇ ನಾಯಿಗಳು ದಾಳಿ ನಡೆಸಿದೆ. ಇಮ್ರಾನ್ ಎಂಬುವರಿಗೆ ಖಾಸಗಿ ಬಸ್ ನಿಲ್ದಾಣದಲ್ಲಿ ಕಚ್ಚಿದೆ. ಲೋಕೇಶ್ ಎಂಬುವರಿಗೆ ಪೊಲೀಸ್ ಠಾಣೆ ರಸ್ತೆಯಲ್ಲಿ ಕಚ್ಚಿದೆ.
ಹುಚ್ಚು ಹಿಡಿದಿರುವ ಬೀದಿ ನಾಯಿಗಳು ಪಟ್ಟಣದಲ್ಲಿ ಓಡಾಡಿಕೊಂಡು ಸಿಕ್ಕಿದವರಿಗೆಲಾ ಕಚ್ಚಿ ಗಾಯಗೊಳಿಸಿದೆ. ಗಾಯಗೊಂಡ ಎಲ್ಲರೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂಜೆಕ್ಷನ್ ಪಡೆದುಕೊಂಡಿದ್ದಾರೆ.
ಪಾಂಡವಪುರ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ತುಂಬಾ ಹೆಚ್ಚಾಗಿದ್ದರೂ ಪುರಸಭೆ ಆಡಳಿತ ನಾಯಿಯನ್ನು ಹಿಡಿದು ಬೇರೆಡೆಗೆ ಸಾಗಿಸುವ ಕೆಲಸ ಮಾಡಿಲ್ಲ. ನಾಯಿಗಳನ್ನು ಸಾಯಿಸಬಾರದು ಎಂದು ಕಾನೂನು ಇದೆ. ಆದರೆ ಬೇರೆಡೆಗೆ ಸಾಗಿಸಿದರೆ ಜನರ ಪ್ರಾಣ ಉಳಿಯುತ್ತದೆ. ಬೀದಿ ನಾಯಿಗಳ ದಾಳಿಗೆ ಜನರು ಸಾಯುವ ಮುಂಚೆ ಕ್ರಮ ಜರುಗಿಸಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.