ಬೆಳಗಾವಿ, ಜ 13: ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಎಂಟು ನವಿಲುಗಳಿಗೆ ವಿಷ ಉಣಿಸಿ ಹತ್ಯೆ ಮಾಡಿದ ಆರೋಪಿಯನ್ನು ಬಂಧಿಸಲಾಗಿದೆ. ಝಳಕಿ ಗ್ರಾಮದ ನಿವಾಸಿ ಮಂಜುನಾಥ ಪವಾರ್ ಬಂಧಿತ ವ್ಯಕ್ತಿ. ಘಟನೆ ಕುರಿತು ರಾಯಬಾಗ ಎಸಿಎಫ್ ಸುನೀತಾ ನಿಂಬರಗಿ ಪ್ರತಿಕ್ರಿಯೆ ನೀಡಿದ್ದು, ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಮೂರು ಹೆಣ್ಣು, ಐದು ಗಂಡು ನವಿಲು ಕಂಡು ಬಂತು. ತಕ್ಷಣ ಮೃತ ನವಿಲುಗಳನ್ನ ತಂದು ಮರಣೋತ್ತರ ಪರೀಕ್ಷೆ ಮಾಡಿಸಿದ್ದೇವೆ. ಇನ್ನೂ ಇಬ್ಬರು ಆರೋಪಿಗಳು ಪರಾರಿಯಾಗಿದ್ದು ಅವರ ಶೋಧ ಮಾಡುತ್ತಿದ್ದೇವೆ ಎಂದಿದ್ದಾರೆ.
ಬಂಧಿತ ಆರೋಪಿ ಮಂಜುನಾಥ ಪವಾರ್ ಇಟ್ಟಿಗೆ ಖಾರ್ನೆಯಲ್ಲಿ ಕೆಲಸ ಮಾಡುತ್ತಿದ್ದ. ಎರಡು ತಂಡ ರಚನೆ ಮಾಡಿದ್ದು, ಎಸ್ಕೇಪ್ ಆಗಿದ್ದವರನ್ನ ಬಂಧಿಸಲಾಗುವುದು. ನವಿಲು ಮಾಂಸಕ್ಕಾಗಿ ವಿಷ ಹಾಕಿ ಕೊಂದಿದ್ದಾರೆ. ಮೆಕ್ಕೆಜೋಳದ ಕಾಳುಗಳಲ್ಲಿ ವಿಷ ಹಾಕಿ ಕೊಂದಿದ್ದಾರೆ ಅಂತಾ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ತನಿಖೆ ಬಳಿಕ ಇನ್ನಷ್ಟು ಮಾಹಿತಿ ಬರುವುದಾಗಿ ಸುನೀತಾ ನಿಂಬರಗಿ ಹೇಳಿದ್ದಾರೆ.