ಸೆ.15: ಗಣೇಶ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇವೆ. ಗಣೇಶ ಮೂರ್ತಿಗಳು ಮತ್ತು ಹಬ್ಬದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರ ನಡುವೆ ಮುಂಗಾರು ಮಳೆ ಕೈಕೊಟ್ಟ ಕಾರಣ ಬೇಳೆಕಾಳುಗಳ ಬೆಲೆಯಲ್ಲೂ ತೀವ್ರ ಏರಿಕೆ ಕಂಡು ಬಂದಿದೆ. ಹೀಗಾಗಿ ಬೇಳೆಕಾಳುಗಳ ಬೆಲೆಯಲ್ಲಿ 20-30% ಏರಿಕೆಯಾಗಿದೆ.
ಮಾರುಕಟ್ಟೆಗಳಿಗೆ ಮುಗಿಬಿದ್ದು ಜನ ಭರ್ಜರಿ ಶಾಪಿಂಗ್ ಮಾಡುತ್ತಿದ್ದಾರೆ. ಮನೆ ಅಲಂಕಾರ, ಗಣೇಶನನ್ನು ಕೂರಿಸಲು ಬೇಕಾದ ವಸ್ತುಗಳ ಖರೀದಿಯಲ್ಲಿ ಜನ ತೊಡಗಿದ್ದಾರೆ. ಆದರೆ ಬೇಳೆಕಾಳುಗಳ ದಿಢೀರ್ ದರ ಏರಿಕೆ ಗ್ರಾಹಕರಿಗೆ ಮತ್ತಷ್ಟು ಹೊಡೆತ ಕೊಟ್ಟಿದೆ. ಜೂನ್-ಜುಲೈನಲ್ಲಿ ಕಿಲೋಗೆ 130 ರಿಂದ 135 ರೂ.ಗೆ ಸಿಗುತ್ತಿದ್ದ ‘ಒಬ್ಬಟ್ಟು’ ತಯಾರಿಸುವ ಕಡಲೆ ಬೆಳೆ ಈಗ ಕೆಜಿಗೆ 165 ರಿಂದ 175 ರೂ.ಗೆ ಮಾರಾಟವಾಗುತ್ತಿದೆ. 95 ರಿಂದ 100 ರೂ.ಗೆ ಸಿಗುತ್ತಿದ್ದ ಒಂದು ಕಿಲೋ ಹಸಿರುಬೇಳೆ ಈಗ ಕೆಜಿಗೆ 130 ರಿಂದ 135 ರೂ ಇದೆ. ಇತರ ಬೇಳೆಕಾಳುಗಳದ್ದೂ ಇದೇ ಕಥೆ ಆಗಿದೆ. ಪ್ರತಿ ಕಿಲೋಗೆ ಸರಾಸರಿ 30ರಿಂದ 40 ರೂ. ಏರಿಕೆಯಾಗಿದೆ.
“ಸರಿಯಾದ ಪ್ರಮಾಣದಲ್ಲಿ ಮಳೆಯಾಗದೇ ಇರುವುದೇ ಬೆಲೆ ಗಗನಕ್ಕೇರಲು ಪ್ರಮುಖ ಕಾರಣ. ಪ್ರಮುಖ ಬೇಳೆಕಾಳುಗಳಲ್ಲಿ ಒಂದಾದ ತೊಗರಿ ಬೇಳೆ ಬೆಳೆ ಮೊದಲ ಕೊಯ್ಲಿನಲ್ಲಿ ವಿಫಲವಾಗಿದೆ. ಹಾಗೆಯೇ ಕಡಲೆ ಬೆಳೆ ಮತ್ತು ಹುರಿಕಡಲೆ, ಎರಡೂ ಶೇಕಡಾ 30 ರಷ್ಟು ಬೆಳೆ ನಷ್ಟವಾಗಿದೆ. ಕಲಬುರಗಿ, ವಿಜಯಪುರ, ಬೀದರ್, ಯಾದಗಿರಿ ಮತ್ತು ರಾಯಚೂರು ದ್ವಿದಳ ಧಾನ್ಯಗಳ ಉತ್ಪಾದನೆಗೆ ಪ್ರಮುಖ ಜಿಲ್ಲೆಗಳಾಗಿದ್ದು, ಈ ಎಲ್ಲ ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಿದೆ. “ಮುಂದಿನ ದಿನಗಳಲ್ಲಿ ಈ ಜಿಲ್ಲೆಗಳಲ್ಲಿ ಮಳೆಯಾದರೆ, ಡಿಸೆಂಬರ್ ವೇಳೆಗೆ ಬೆಲೆಯಲ್ಲಿ ಸ್ವಲ್ಪ ಸ್ಥಿರತೆಯನ್ನು ನಾವು ನಿರೀಕ್ಷಿಸಬಹುದು. ಮಳೆಯಾದರೆ, ಶೇಕಡಾ 70 ರಷ್ಟು ಬೆಳೆ ಪುನಶ್ಚೇತನಗೊಳ್ಳಬಹುದು” ಎಂದು ಎಫ್ಕೆಸಿಸಿಐ ಚುನಾಯಿತ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ ಹೇಳಿದರು.