ಮೈಸೂರು, ಸೆ.17: ಜಿಲ್ಲೆಯಲ್ಲಿ ಚಿರತೆ, ಹುಲಿ ಹಾವಳಿ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಹೆಚ್ಡಿ ಕೋಟೆ ತಾಲೂಕಿನಲ್ಲಿ ಜನರು ನಿತ್ಯ ಆತಂಕದಲ್ಲೇ ಜೀವನ ಕಳೆಯುತ್ತಿದ್ದಾರೆ. ಈ ನಡುವೆ ತಾಲೂಕಿನ ಸುಣಕಲ್ ಮಂಟಿ ಗ್ರಾಮದಲ್ಲಿ ಚಿರತೆ ದಾಳಿಗೆ ಕರು, ಮೇಕೆಗಳು ಬಲಿಯಾಗಿದ್ದು, ಇತ್ತ ಇದೇ ತಾಲೂಕಿನ ಹೊಸ ಹೊಳಲು ಗ್ರಾಮದಲ್ಲಿ ಮೇಯುತ್ತಿದ್ದ ಹಸುಗಳ ಮೇಲೆ ಹುಲಿ ದಾಳಿ ನಡೆದಿದೆ.
ಹೆಚ್ಡಿ ಕೋಟೆ ತಾಲೂಕಿನ ನೇರಳೆ ಗಣೇಶನ ಗುಡಿ ಗ್ರಾಮ ಸುಣಕಲ್ ಮಂಟಿ ಗ್ರಾಮದಲ್ಲಿ ಚಿರತೆ ಹಾವಳಿ ಹೆಚ್ಚಾಗುತ್ತಿದೆ. ರೈತರಾದ ವೆಂಕಟಸ್ವಾಮಿ, ಚಿಕ್ಕಯ್ಯ ಮತ್ತು ಸಿದ್ದೇಗೌಡ ಅವರಿಗೆ ಸೇರಿದ ತಲಾ ಒಂದೊಂದು ಮೇಕೆಗಳ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ. ರೈತ ನಾಗೇಗೌಡ ಅವರಿಗೆ ಸೇರಿದ ಕರು ಕೂಡ ಚಿರತೆ ದಾಳಿಗೆ ಬಲಿಯಾಗಿದೆ.
ಚಿರತೆ ದಾಳಿಯಿಂದ ಗ್ರಾಮದ ಜನರು ಭಯಬೀತರಾಗಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು, ಸಿಬ್ಬಂದಿ ಗ್ರಾಮದ ಹೊರವಲಯದಲ್ಲಿ ಬೋನು ಇರಿಸಿ ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಸಂಜೆ ನಂತರ ಎಚ್ಚರಿಕೆಯಿಂದ ಓಡಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.