ನಾಳೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯಲಿದೆ ಎಂದು ಮಂಡ್ಯ ತಾಲೂಕಿನ ಕೀಲಾರದಲ್ಲಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಮೊನ್ನೆ ಸರ್ವಪಕ್ಷ ಸಭೆ ನಡೆಸಿ ನೀರು ಬಿಡೋಕೆ ಆಗಲ್ಲ ಎಂದಿದ್ದೇವೆ. ಸೆಪ್ಟೆಂಬರ್ 21ರಂದು ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ಇದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗೆ ಒಂದು ಆತಂಕ ಇದೆ. ಪ್ರಾಧಿಕಾರದ ಸಭೆಯಲ್ಲಿ ನೀರು ಕಡಿಮೆ ಮಾಡುವಂತೆ ಹೇಳಿದರೆ ಖುಷಿ. ಒಂದು ವೇಳೆ ಪ್ರಾಧಿಕಾರ ನೀರು ಬಿಡಿ ಅಂದರೇ ಏನ್ ಮಾಡೋದು? ನೀರು ಬಿಡದೇ ನಾವು ‘ಸುಪ್ರೀಂ’ ಕೆಂಗಣ್ಣಿಗೆ ಗುರಿಯಾಗಬೇಕಾ? ಎರಡು ದಿನ ನೀರು ಬಿಟ್ಟು ‘ಸುಪ್ರೀಂ’ ಮುಂದೆ ಕೈ ಮುಗಿದು ನಿಲ್ಬೇಕಾ? ಆ ಆತಂಕದ ಬಗ್ಗೆ ಚರ್ಚೆ ಮಾಡಿದ್ದೇವೆ. ಅದರ ಹೊರತು ನೀರು ಬಿಡುವ ತೀರ್ಮಾನ ನಾವು ಇನ್ನೂ ಮಾಡಿಲ್ಲ. ಕಾವೇರಿ ವಿಚಾರದಲ್ಲಿ ವಿರೋಧ ಪಕ್ಷದವರು ವೀರಾವೇಷದಿಂದ ಮಾತನಾಡಬಹುದು ಎಂದರು.