ತನ್ನ ಮಗನ ಶೋಕಿಗೆ ಕುಮ್ಮಕ್ಕು ನೀಡಿದ ನಂಜನಗೂಡು ಸಂಚಾರ ಠಾಣೆಯ ಮಹಿಳಾ ಪಿಎಸ್ಐ ಯಾಸ್ಮಿನ್ ತಾಜ್ ಅವರನ್ನು ಎತ್ತಂಗಡಿ ಮಾಡಲಾಗಿದೆ. ಜಿಲ್ಲಾ ಅಪರಾಧ ದಾಖಲೆಗಳ ವಿಭಾಗಕ್ಕೆ ವರ್ಗಾವಣೆ ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದು, ಇಂದು ಮಧ್ಯಾಹ್ನ ಡಿಸಿಆರ್ಬಿ ಡಿವೈಎಸ್ಪಿ ಬಳಿ ವರದಿ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.
ನಂಜನಗೂಡು ಸಂಚಾರ ವಿಭಾಗದ ಪಿಎಸ್ಐ ಆಗಿದ್ದ ಯಾಸ್ಮಿನ್ ತಾಜ್ ಪುತ್ರ ಸೈಯ್ಯದ್ ಐಮಾನ್ ನಿನ್ನೆ ಬೈಕ್ ವ್ಹೀಲಿಂಗ್ ಮಾಡಿ ವೃದ್ಧ ರೈತ ಗುರುಸ್ವಾಮಿ ಸಾವಿಗೆ ಕಾರಣನಾಗಿದ್ದನು. ಈ ಹಿನ್ನೆಲೆಯಲ್ಲಿ ಪಿಎಸ್ಐ ಯಾಸ್ಮಿನ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಇಲಾಖೆ ವಿರುದ್ಧವೇ ಪಿಎಸ್ಐ ಅಸಮಾಧಾನ
ತನ್ನನ್ನು ವರ್ಗಾವಣೆ ಮಾಡಿದ ಪೊಲೀಸ್ ಇಲಾಖೆ ವಿರುದ್ಧವೇ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ ಯಾಸ್ಮಿನ್ ತಾಜ್, ಶಿಸ್ತಿನ ಇಲಾಖೆ ಆದೇಶವನ್ನು ಸಾರ್ವಜನಿಕವಾಗಿ ಟೀಕಿಸಿದ್ದಾರೆ. ವರ್ಗಾವಣೆ ಆದೇಶದ ಪ್ರತಿಯನ್ನು ವಾಟ್ಸಾಪ್ ಸ್ಟೇಟಸ್ನಲ್ಲಿ ಹಾಕಿ ನನ್ನ ಪ್ರೀತಿಯ ಇಲಾಖೆಯಿಂದ ಇದನ್ನು ಪಡೆದುಕೊಂಡಿದ್ದೇನೆ. ಧನ್ಯವಾದ ಎಂದು ಬರೆದುಕೊಂಡಿದ್ದಾರೆ.