ಮೈಸೂರು ಸೆ.19: ತಮಿಳುನಾಡಿಗೆ ಐದು ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣ ಪ್ರಾಧಿಕಾರ ಆದೇಶ ಹೊರಡಿಸಿದ್ದು, ಇದನ್ನು ಖಂಡಿಸಿ ಮಂಡ್ಯದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ತಮಿಳುನಾಡಿಗೆ ನೀರು ಬಿಡುವ ವಿಚಾರವಾಗಿ ಸಾಕಷ್ಟು ಆಕ್ರೋಶ ವ್ಯಕ್ತವಾಗುತ್ತಿದ್ದರೂ, ಕರ್ನಾಟಕ ಸರ್ಕಾರ, ಕಾವೇರಿ ನೀರು ನಿರ್ವಹಣ ಪ್ರಾಧಿಕಾರದ ಆದೇಶವನ್ನು ಪಾಲನೆ ಮಾಡಲು ಮುಂದಾಗಿದೆಯಾ ಎಂಬ ಅನುಮಾನ ವ್ಯಕ್ತವಾಗಿದೆ. ತಮಿಳುನಾಡಿಗೆ ಕಬಿನಿ ಜಲಾಶಯದಿಂದ ಸರ್ಕಾರ 4053 ಕ್ಯೂಸೆಕ್ ನೀರು ಹರಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಕಬಿನಿ ಜಲಾಶಯಕ್ಕೆ 3525 ಕ್ಯೂಸೆಕ್ ಒಳ ಹರಿವು ಇದ್ದು, ನಾಲೆಗಳಿಗೆ 2390 ಹಾಗೂ ನದಿಗೆ 1663 ಸೇರಿದಂತೆ ಒಟ್ಟು 4053 ಕ್ಯೂಸೆಕ್ ನೀರು ಸರ್ಕಾರ ಬಿಡುವ ಮೂಲಕ ಸರ್ಕಾರ ಪ್ರಾಧಿಕಾರದ ಆದೇಶಕ್ಕೆ ಮಣಿದಿದೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ. ಸದ್ಯ ಜಲಾಶಯದಲ್ಲಿ 76.18 ಅಡಿ ನೀರು ಇದ್ದು, ಗರಿಷ್ಟ ಸಾಮರ್ಥ್ಯ 84 ಅಡಿ ಇದೆ. 18.78 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 14.91 ಟಿಎಂಸಿ ನೀರು ಇದೆ.