ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನ ಮಂತ್ರಿ ಹೆಚ್ ಡಿ ದೇವೇಗೌಡ ಅವರು ಹಿಂದೆ ಸಂಸತ್ತಿನಲ್ಲಿ ನೀಡಿದ್ದ ಔಟ್ ಆಫ್ ದಿ ಕೋರ್ಟ್ ಸೆಟ್ಲ್ ಮೆಂಟ್ ಸಲಹೆಯನ್ನು ಸ್ವಾಗತಿಸಿದರು. ಆದರೆ ಇದೇ ವಿಷಯದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡುತ್ತಿರುವ ಹೇಳಿಕೆಗಳನ್ನು ಖಂಡಿಸಿದರು. ಬೊಮ್ಮಾಯಿ ಅವರು ಹಿಂದೆ ನೀರಾವರಿ ಸಚಿವ ಮತ್ತು ಮುಖ್ಯಮಂತ್ರಿಯೂ ಆಗಿದ್ದವರು, ಹೀಗಾಗಿ ಅವರು ಸಮಸ್ಯೆಯನ್ನು ಉಲ್ಬಣಗೊಳಿಸುವ ಹೇಳಿಕೆಗಳನ್ನು ನೀಡಬಾರದು ಎಂದು ಹೇಳಿದರು. ಬೊಮ್ಮಾಯಿ ನೀಡುವ ಸಲಹೆಯನ್ನು ಸರ್ಕಾರ ತಿರಸ್ಕರಿಸುತ್ತದೆ ಅಂತೇನೂ ಇಲ್ಲ, ಆದರೆ ಅದು ರಚನಾತ್ಮಕವಾಗಿರಬೇಕು ಎಂದು ಶಿವಕುಮಾರ್ ಹೇಳಿದರು. ದೆಹಲಿಯಲ್ಲಿರುವ ಕರ್ನಾಟಕದ ಲೀಗಲ್ ತಂಡದಲ್ಲಿ ಫಾಲಿ ನಾರಿಮನ್ ಅವರ ಶಿಷ್ಯರೇ ಇರುವುದರಿಂದ ಕಾವೇರಿ ನೀರು ನಿರ್ವಹಣಾ ಪ್ರಧಿಕಾರ ಮತ್ತು ಸುಪ್ರೀಮ್ ಕೋರ್ಟ್ ನಲ್ಲಿ ಕರ್ನಾಟಕದ ಹಿತಾಸಕ್ತಿಯನ್ನು ಸಮರ್ಥವಾಗಿ ಮಂಡಿಸಲಾಗುವುದು ಎಂದು ಶಿವಕುಮಾರ್ ಹೇಳಿದರು.