ಕಾವೇರಿ ಕಿಚ್ಚು ಭುಗಿಲೇಳುತ್ತಿರುವ ಬೆನ್ನಲ್ಲೇ ಇದೀಗ ಹೋರಾಟದ ಅಖಾಡಕ್ಕೆ ಮಳವಳ್ಳಿ ಕಾಂಗ್ರೆಸ್ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಧುಮುಕಿದ್ದಾರೆ. ತಮಿಳುನಾಡಿಗೆ ನೀರು ಹರಿಸಿರುವ ರಾಜ್ಯ ಸರ್ಕಾರದ ನಿಲುವಿಗೆ ವಿರೋಧ ವ್ಯಕ್ತಪಡಿಸಿರುವ ಅವರು ನಮಗೇ ತಿನ್ನಲು ಇಲ್ಲದಾಗ ಮತ್ತೊಬ್ಬರಿಗೆ ಅನ್ನ ನೀಡಲಾಗದು. ಸರ್ಕಾರವೂ ಸಂಕಷ್ಟ ಸೂತ್ರ ಅರಿಯದೇ ನೀರು ಹರಿಸಿ ಲೋಪ ಎಸಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ನಗರದಲ್ಲಿ ನಡೆದ ರೈತರ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿ, ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ನ್ಯಾಯ ದೊರಕಿಸುವಲ್ಲಿ ಕಾಂಗ್ರೆಸ್ ಆದಿಯಾಗಿ ಎಲ್ಲ ಸರ್ಕಾರ ಗಳೂ ವಿಫಲವಾಗಿವೆ. ನಾನೂ ಇಂದು ಆಡಳಿತ ಪಕ್ಷದಲ್ಲಿದ್ದೇನೆ. ಆದರೆ ಮಂಡ್ಯದ ಒಬ್ಬ ನಾಗಕರೀಕನಾಗಿ ತಮಿಳುನಾಡಿಗೆ ನೀರು ಹರಿಸುವುದನ್ನು ಸರ್ಕಾರ ನಿಲ್ಲಿಸಬೇಕು ಎಂಬುದು ನನ್ನ ಒತ್ತಾಯ. ನಮ್ಮ ರೈತರ ಸಂಕಷ್ಟಕ್ಕೆ ಯಾವ ಕಾನೂನಾಗಲೀ, ಸರ್ಕಾರವೇ ಆಗಲೀ ಪರಿಹಾರದ ದಾರಿ ತೋರುವಲ್ಲಿ ಈವರೆಗೂ ಸಫಲರಾಗಿಲ್ಲ. ಹಾಗಾಗಿ ನಾನು ಶಾಸಕನೆಂಬುದನ್ನೂ ಮರೆತು ಒಬ್ಬ ರೈತನ ಮಗನಾಗಿ ಇಲ್ಲಿ ಬಂದಿದ್ದೇನೆ.