ಮೈಸೂರು: ಇಂದಿನ ಕರ್ನಾಟಕ ಬಂದ್ಗೆ ಅರಮನೆ ನಗರಿ ಮೈಸೂರಿನಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ತುರ್ತು ಸೇವೆಯನ್ನು ಹೊರತುಪಡಿಸಿ ಎಲ್ಲಾ ಸೇವೆಗಳೂ ಇಂದು ಬಂದ್ ಆಗಿವೆ. ಬಸ್, ಲಾರಿ, ಟ್ಯಾಕ್ಸಿ, ಆಟೋ ಚಾಲಕರು ಮತ್ತು ಮಾಲೀಕರ ಸಂಘದಿಂದ ಇಂದಿನ ಬಂದ್ ಗೆ ಬೆಂಬಲ ದೊರೆತಿದೆ. ಕಾವೇರಿ ನೀರಿನ ಉಳಿವಿಗಾಗಿನ ಹೋರಾಟದ ಬಂದ್ ಗೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ. ಮೈಸೂರು ನಗರ ಮತ್ತು ಜಿಲ್ಲಾ ಲಾರಿ ಮಾಲೀಕರ ಸಂಘ ಹಾಗೂ ಖಾಸಗಿ ಬಸ್ ಮಾಲೀಕರ ಸಂಘ, ಮೈಸೂರು ಟ್ಯಾಕ್ಸಿ ಮಾಲೀಕರ ಸಂಘ, ಮೈಸೂರು ನಗರ ಆಟೋ ಚಾಲಕರ ಸಂಘದಿಂದಲೂ ಬಂದ್ ಗೆ ಬೆಂಬಲ ಸಿಕ್ಕಿದೆ. ಕಾವೇರಿ ಕ್ರಿಯಾ ಸಮಿತಿ ಸದಸ್ಯರಿಂದ ಬಂದ್ ಯಶಸ್ವಿಗೊಳಿಸಲು ಸಕಲ ತಯಾರಿ ಮಾಡಿಕೊಳ್ಳಲಾಗಿದ್ದು, ಮೈಸೂರು ಜಿಲ್ಲಾಡಳಿತ ಮುನ್ನೆಚ್ಚರಿಕೆಯಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ.