ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಗಮಿಸಿರುವ ಗಜಪಡೆಯ ಮಾವುತರು, ಕಾವಾಡಿಗರು ಮತ್ತು ಅವರ ಕುಟುಂಬದ ಸದಸ್ಯರಿಗೆ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಶುಕ್ರವಾರ ಬೆಳಗ್ಗೆ ಉಪಾಹಾರ ಬಡಿಸಿದರು. ಮೈಸೂರು ಅರಮನೆಯ ಮಂಡಳಿಯಿಂದ ಅರಮನೆ ಆವರಣದಲ್ಲಿ ಏರ್ಪಡಿಸಿದ್ದ ಉಪಾಹಾರ ಕೂಟದಲ್ಲಿ ಬೇಳೆ ಹೋಳಿಗೆ, ತುಪ್ಪ, ತಟ್ಟೆ ಇಡ್ಲಿ, ಸಾಂಬಾರು, ಚಟ್ನಿ, ಮಸಾಲೆ ದೋಸೆ, ಸಾಗು, ಉದ್ದಿನ ವಡೆ, ಟೊಮೆಟೋ ಬಾತ್, ಕೇಸರಿ ಬಾತ್ ಬಡಿಸಿದ ಸಚಿವರು, ನಂತರ ಮಾವುತರ ಮತ್ತು ಕಾವಾಡಿಗಳೊಂದಿಗೆ ಕುಳಿತು ತಾವು ಸಹ ಉಪಾಹಾರ ಸೇವಿಸಿದರು. ಜೊತೆಗೆ ಟೀ, ಕಾಫಿ ಸಹ ವ್ಯವಸ್ಥೆ ಮಾಡಲಾಗಿತ್ತು.