ಶಿವಮೊಗ್ಗದ ರಾಗಿಗುಡ್ಡ ಪ್ರದೇಶದಲ್ಲಿ ಭಾನುವಾರ ಸಂಜೆ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ನಡೆದ ಗಲಭೆ ಬಗ್ಗೆ ಗೃಹ ಸಚಿವ ಪರಮೇಶ್ವರ್ ಅವರು ಲಘುವಾಗಿ ಮಾತನಾಡುವ ಮೂಲಕ ಮತ್ತೊಮ್ಮೆ ವಿರೋಧ ಪಕ್ಷಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಹೌದು.. ಶಿವಮೊಗ್ಗದಲ್ಲಿ ಇದೇನು ಹೊಸದಾಗಿ ನಡೆಯುತ್ತಿದ್ಯಾ? ಎಂದು ಹೇಳುವ ಮೂಲಕ ಶಿವಮೊಗ್ಗದ ಗಲಭೆ ವಿಚಾರವನ್ನು ಗೃಹ ಸಚಿವ ಪರಮೇಶ್ವರ್ ಉಡಾಫೆ ಮಾತುಗಳನ್ನಾಡಿದ್ದಾರೆ. ಅಲ್ಲದೇ ಗೃಹ ಸಚಿವರ ಈ ಹೇಳಿಕೆ ಗಮನಿಸಿದರೆ ಈ ಪ್ರಕರಣವನ್ನು ಲಘುವಾಗಿ ತೆಗೆದುಕೊಂಡಂತೆ ಕಾಣಿಸಿದೆ. ಶಿವಮೊಗ್ಗ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಇಂದು(ಅ.02) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ನಮಗೆ ಅಲ್ಲಿ ಟೆನ್ಶನ್ ಇದೆ ಎಂದು ಗೊತ್ತಿತ್ತು. ಪ್ರೊಸೆಷನ್ ಹೋದಾಗ ಏನಾದರೂ ಆಗುತ್ತೆ ಎಂದು ನಾವು ಸಾಕಷ್ಟು ಭದ್ರತಾ ವ್ಯವಸ್ಥೆ ಮಾಡಿದ್ದೆವು. ಹಾಗಾಗಿ ದೊಡ್ಡ ಪ್ರಮಾಣದ ಗಲಾಟೆ ಆಗಿಲ್ಲ. ಅದನ್ನು ಪೊಲೀಸರು ನಿಯಂತ್ರಿಸಿದ್ದಾರೆ. ಸಣ್ಣಪುಟ್ಟ ಗಲಾಟೆ ಆದಾಗ ಅದನ್ನ ಹೇಗೆ ಕ್ರಮ ತೆಗೆದುಕೊಳ್ಳಬೇಕೋ ಅದನ್ನೇ ಪೊಲೀಸರು ಮಾಡಿದ್ದಾರೆ. ಅವರ ಕಡೆ ಇವರ ಕಡೆ ನಾಲ್ವರನ್ನು ಅರೆಸ್ಟ್ ಮಾಡಿದ್ದಾರೆ ಎಂದರು.