ರಾಮನಗರ: ಸಂಕ್ರಾಂತಿಗೆ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಗಾಂಧಿ ಜಯಂತಿ ಹಿನ್ನೆಲೆ ಇಂದು ಚನ್ನಪಟ್ಟಣ ಬಸ್ ನಿಲ್ದಾಣ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಿಪಿ ಯೋಗೇಶ್ವರ್ ಭಾಗಿಯಾಗಿದ್ದರು. ಕಾರ್ಯಕ್ರಮದ ಬಳಿಕ ಮಾತನಾಡಿದ ಸಿಪಿ ಯೋಗೇಶ್ವರ್, ಈ ಸರ್ಕಾರದಲ್ಲಿ ನಿರ್ದಿಷ್ಟ ಕೋಮುಗಳನ್ನ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಈ ವಿಚಾರ ಶಾಸಕರಿಗೂ ಅನ್ನಿಸುತ್ತಿದೆ. ಹಾಗಾಗಿಯೇ ಲಿಂಗಾಯಿತ ಸಿಎಂ ವಿಚಾರ ಪ್ರಸ್ತಾಪ ಆಗ್ತಿದೆ ಎಂದರು.
ಈ ಸರ್ಕಾರದಲ್ಲಿ ಶಾಸಕರಿಗೆ ಅಭಿವೃದ್ಧಿ ಕೆಲಸಗಳನ್ನು ಮಾಡಲು ಆಗ್ತಿಲ್ಲ. ಬಿಟ್ಟಿ ಸ್ಕೀಮ್ ಗಳಿಗೆ ಹಣ ಹೋಗ್ತಿದೆ, ಶಾಸಕರು ನಿರುದ್ಯೋಗಿಗಳಾಗಿದ್ದಾರೆ. 2024 ಕ್ಕೆ ಬೆ.ಗ್ರಾಮಾಂತರ ಬಿಜೆಪಿ ಪಾಲಾಗಲಿದ್ದು, ಸಂಸದದ ಡಿ.ಕೆ.ಸುರೇಶ್ ದುರಂಹಕಾರಕ್ಕೆ ಜನ ಉತ್ತರ ಕೊಡ್ತಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನಲ್ಲಿ ಹೊಂದಾಣಿಕೆ ಇಲ್ಲದ ಕಾರಣ ಸಿಎಂ ಮತ್ತು ಡಿಸಿಎಂ ಹುದ್ದೆಗೆ ಕಿತ್ತಾಟ ಶುರುವಾಗಿದೆ. ನನಗೆ 16 ಜನ ಕಾಂಗ್ರೆಸ್ ಶಾಸಕರು ಪರಿಚಯವಿದ್ದು, ಸಿಕ್ಕಾಗ ಮಾತನಾಡುತ್ತಿರುತ್ತೇವೆ. ಶಾಸಕರು ಸರ್ಕಾರದ ವಿರುದ್ಧ ಸಿಡಿದು ಹೊರಗೆ ಬರುತ್ತಾರೆ ಎಂದು ಭವಿಷ್ಯ ನುಡಿದರು.