ಹುಣಸೂರು : ತಾಲೂಕಿನಲ್ಲಿ ಭತ್ತದ ಬೆಳೆಗೆ ಬೆಂಕಿರೋಗ ಮತ್ತು ತಂತಿಹುಳು ರೋಗಬಾಧೆ ತಗುಲಿದ್ದು, ರೈತರು ಔಷಧೋಪಚಾರ ಕೈಗೊಳ್ಳಬೇಕೆಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜೆ. ವೆಂಕಟೇಶ್ ಹೇಳಿದ್ದಾರೆ
ತಾಲೂಕಿನಲ್ಲಿ ಈ ಸಾಲಿನಲ್ಲಿ 7,450 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಮೋಡ ಮುಸುಕಿದ ವಾತಾವರಣವಿರುವ ಕಾರಣ ಭತ್ತಕ್ಕೆ ಬೆಂಕಿರೋಗ ಸಹಜವಾಗಿ ಬರುತ್ತದೆ. ಅದರೊಂದಿಗೆ ಈ ಬಾರಿ ತಂತಿಹುಳು ರೋಗಬಾಧೆಯೂ ಕಾಣಿಸಿಕೊಂಡಿದೆ ಕಸಬಾ ಮತ್ತು ಹನಗೋಡು ಹೋಬಳಿಗಳ ಗಡಿಭಾಗದ ಗ್ರಾಮಗಳಲ್ಲಿ ರೋಗಬಾಧೆ ಕಾಣಿಸಿಕೊಂಡಿದ್ದು, ತಾಲೂಕಿನಾದ್ಯಂತ ರೋಗಬಾಧೆ ಕಾಣಿಸಿಕೊಂಡಿಲ್ಲ. ರೋಗ ತಗುಲಿರುವ ಜಮೀನುಗಳಲ್ಲಿ ರೈತರು ಔಷಧೋಪಚಾರ ನಡೆಸುವುದು ಅಗತ್ಯ. ಈ ಕುರಿತು ಹೋಬಳಿ ವ್ಯಾಪ್ತಿಯ ರೈತಸಂಪರ್ಕ ಕೇಂದ್ರ ಮತ್ತು ನಗರದ ಸಹಾಯಕ ನಿರ್ದೇಶಕರ ಕಚೇರಿಯನ್ನು ರೈತರು ಸಂಪರ್ಕಿಸಬಹುದಾಗಿದೆ ಎಂದು ಅವರು ಕೋರಿದ್ದಾರೆ.