ತಲಕಾಡು : ಮಾಧವಮಂತ್ರಿ ಅಣೆಕಟ್ಟೆ ಸೇರಿದಂತೆ ಕಟ್ಟೆಯಿಂದ ತಲಕಾಡು ಕುಕ್ಕೂರಿನ ಬಯಲಿನವರೆಗೆ ನಾಲೆಯಲ್ಲಿ ಕಸ ಜೊಂಡು ತ್ಯಾಜ್ಯ ಆವರಿಸಿದ್ದರಿಂದ ಸಮರ್ಪಕವಾಗಿ ನಾಲೆಯಲ್ಲಿ ನೀರು ಹರಿಯದೆ ರೈತರು ಬೆಳೆದ ಬೆಳೆಗಳಿಗೆ ತೊಂದರೆಯಾಗಿತ್ತು.
ಹೀಗಾಗಿ ಬನ್ನೂರು ನಾಲಾ ಅಧಿಕಾರಿಗಳು ಮೂರು ದಿನದ ಹಿಂದೆ ಇಲ್ಲಿನ ನಾಲೆಯಲ್ಲಿ ನೀರು ನಿಲ್ಲಿಸಿ, ಅಣೆಕಟ್ಟೆ ಹಾಗು ನಾಲೆಯನ್ನು ಸಮರೋಪಾದಿಯಲ್ಲಿ ಸ್ವಚ್ಚತೆಗೆ ಮುಂದಾಗಿದ್ದರು. ಮೂರು ದಿನ ನೀರು ನಿಲ್ಲಿಸಿದ್ದರಿಂದ ಸುಡು ಬಿಸಿಲಿನ ಬೇಗೆಯಲ್ಲಿ ರೈತರ ಬೆಳೆಗಳು ಬಾಡುವ ಹಂತಕ್ಕೆ ತಲುಪಿದ್ದವು.
ಸೋಮವಾರ ಸಂಜೆ ಸ್ವಚ್ಚಗೊಂಡ ಇಲ್ಲಿನ ನಾಲೆಯ ಒಂದು ತೂಬನ್ನು ಸಾಂಕೇತಿಕವಾಗಿ ಎತ್ತುವ ಮೂಲಕ ನೀರು ಬಿಡುಗಡೆ ಗೊಳಿಸಲಾಯಿತು. ಮಂಗಳವಾರ ಕೂಡ ಅಣೆಕಟ್ಟೆ ಹಿನ್ನೀರಿನಲ್ಲಿ ಬಾಕಿಯಾಗಿರುವ ಜೊಂಡಿನ ತೆರವು ಕಾರ್ಯ ಪೂರ್ಣಗೊಳಿಸಿ ಪೂರ್ಣ ಪ್ರಮಾಣದಲ್ಲಿ ನಾಲೆಯಲ್ಲಿ ನೀರು ಹರಿಸಲಾಗುತ್ತದೆ ಎಂದು ಬನ್ನೂರು ನೀರಾವರಿ ಎಇಇ ಮಂಜುನಾಥ್ ತಿಳಿಸಿದ್ದಾರೆ.