ಹುಬ್ಬಳ್ಳಿ: ಸಿದ್ದರಾಮಯ್ಯ ಸರ್ಕಾರ 2013 ರಲ್ಲಿ ಕಾಂತರಾಜ್ ಆಯೋಗ ರಚಿಸಿ ಸುಮಾರು 160 ಕೋಟಿ ರೂ. ವೆಚ್ಚ ಮಾಡಿ ನಡೆಸಿದ ಸಮೀಕ್ಷೆ ಅಸಲಿಗೆ ಜಾತಿ ಗಣತಿ ಹೌದೋ ಅಲ್ಲವೋ ಅನ್ನೋದನ್ನು ಮೊದಲು ಸ್ಪಷ್ಟಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬೊಮ್ಮಾಯಿ, ಹಿಂದಿನ ಸಿದ್ದರಾಮಯ್ಯ ಸರ್ಕಾರ ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ಸಹ ಮಾಡಿಸಿತ್ತು ಆದರೆ ಅದನ್ನೂ ಯಾಕೆ ಸಾರ್ವಜನಿಕಗೊಳಿಸಲಿಲ್ಲ ಅಂತ ಸರ್ಕಾರವೇ ಹೇಳಬೇಕು. ಜಾತಿ ಗಣತಿಯನ್ನು ಚುನಾವಣಾ ಕಾರಣಗಳಿಗಾಗಿ ಸಿದ್ದರಾಮಯ್ಯ ಸರ್ಕಾರ ಸಾರ್ವಜನಿಕಗೊಳಿಸಲಿಲ್ಲ ಅನ್ನೋದು ಸ್ಪಷ್ಟ ಎಂದು ಬೊಮ್ಮಾಯಿ ಹೇಳಿದರು. ನಿನ್ನೆ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಜಾತಿ ಗಣತಿ ಬಗ್ಗೆ ಚರ್ಚೆ ಆಗಿದೆ, ಸರ್ಕಾರ ಅದನ್ನು ಬಿಡುಗಡೆ ಮಾಡಲಿ. ಸಮೀಕ್ಷೆ ಎಲ್ಲ ಸಮುದಾಯಗಳಿಗೆ ಸಮ್ಮತ ಆನಿಸಲಾರದು ಆದರೆ, ಸಾಧಕ ಬಾಧಕಗಳ ಮೇಲೆ ಚರ್ಚೆ ನಡೆಸುವ ಮತ್ತು ತಿದ್ದುಪಾಟುಗಳನ್ನು ಮಾಡುವ ಅವಕಾಶವಂತೂ ಇದ್ದೇ ಇರುತ್ತದೆ ಎಂದು ಬಿಜೆಪಿ ನಾಯಕ ಹೇಳಿದರು.