ಬೆಳಗಾವಿ, ಅ.20: ಜಿಲ್ಲಾ ರಾಜಕಾರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಮೂಗು ತೂರಿಸುತ್ತಿರುವುದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಮುನಿಸಿಗೆ ಕಾರಣವಾಗಿದೆ. ಜಿಲ್ಲೆಗೆ ಸ್ವತಃ ಡಿಸಿಎಂ ಬಂದಿದ್ದರೂ ಸತೀಶ್ ಜಾರಕಿಹೊಳಿ ಜಿಲ್ಲೆಯಿಂದ ಆಚೆ ಉಳಿದಿದ್ದಾರೆ. ಇತರೆ ಕೈ ಶಾಸಕರೂ ಸಾಥ್ ನೀಡಿದ್ದು, ಡಿಕೆ ಶಿವಕುಮಾರ್ ಸ್ವಾಗತಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಯಾರೊಬ್ಬರೂ ಆಗಮಿಸಿಲ್ಲ. ಆದರೆ ಏಕಾಂಗಿಯಾಗಿ ಜಿಲ್ಲಾ ಪ್ರವಾಸ ಮಾಡಿದ ಶಿವಕುಮಾರ್ ಇಂದು ನಿರ್ಗಮಿಸುತ್ತಿದ್ದಂತೆ ಎಲ್ಲಾ ಶಾಸಕರು ಜಿಲ್ಲೆಯಲ್ಲಿ ಪ್ರತ್ಯಕ್ಷಗೊಂಡಿದ್ದಾರೆ.
ಸತೀಶ್ ಜಾರಕಿಹೊಳಿ ಅಸಮಾಧಾನದ ನಡುವೆ ಬೆಳಗಾವಿಯಲ್ಲಿ ಎರಡು ದಿನ ಡಿಸಿಎಂ ಡಿಕೆ ಶಿವಕುಮಾರ್ ಪ್ರವಾಸದಲ್ಲಿದ್ದರೂ ಸ್ವಪಕ್ಷದ ಯಾವೊಬ್ಬ ಶಾಸಕರು ಹಾಗೂ ಜಿಲ್ಲಾ ಘಟಕದ ಅಧ್ಯಕ್ಷರು ಜಿಲ್ಲೆಯಲ್ಲಿ ಕಾಣಿಸಿಲ್ಲ. 11 ಶಾಸಕರಲ್ಲಿ ಕೇವಲ ಓರ್ವ ಶಾಸಕರು ಮಾತ್ರ ಡಿಸಿಎಂ ಭೇಟಿಗೆ ಬಂದಿದ್ದರು.
ಅದಾಗ್ಯೂ, ಎರಡು ದಿನಗಳ ಕಾಲ ಏಕಾಂಗಿಯಾಗಿ ಜಿಲ್ಲಾ ಪ್ರವಾಸ ನಡೆಸಿದ ಡಿಕೆ ಶಿವಕುಮಾರ್ ಅವರು ನಿನ್ನೆ ಬೆಳಗಾವಿಯಿಂದ ನಿರ್ಗಮಿಸಿದ್ದಾರೆ. ಇಂದು ಶಾಸಕರೆಲ್ಲರೂ ಪ್ರತ್ಯಕ್ಷಗೊಂಡಿದ್ದಾರೆ. ಶಾಸಕರಾದ ಆಸೀಫ್ ಸೇಠ್, ರಾಜು ಕಾಗೆ, ಬಾಬಾಸಾಹೇಬ್ ಪಾಟೀಲ್ ಅವರು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದಾರೆ. ಮೈಸೂರು ಪ್ರವಾಸಕ್ಕೆ ಹೋಗಿದ್ದರಿಂದ ಡಿಸಿಎಂ ಭೇಟಿಯಾಗಿಲ್ಲ ಎಂದು ಹೇಳುವ ಮೂಲಕ ಮೂವರು ಶಾಸಕರು ಸಬೂಬು ನೀಡಿದ್ದಾರೆ.
ನಾನಾ ಕಾರ್ಯಕ್ರಮಗಳ ನಿಮಿತ್ತ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು (ಅಕ್ಟೋಬರ್ 18) ಬೆಳಗಾವಿಗೆ ಬಂದಿದ್ದರು. ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರ ಸಭೆಯನ್ನೂ ನಡೆಸಿದ್ದರು. ಆದರೆ ತವರು ಜಿಲ್ಲೆಗೆ ಡಿಕೆ ಶಿವಕುಮಾರ್ ಬಂದರೂ ಜಾರಕಿಹೊಳಿ ಅಂತರ ಕಾಪಾಡಿಕೊಂಡಿದ್ದರು.
ಆ ಮೂಲಕ ಡಿಸಿಎಂಗೆ ತಮ್ಮ ಪ್ರಭಾವದ ಟ್ರೈಲರ್ ತೋರಿಸಿ, ಅಭಿಬಿ ಪಿಕ್ಚರ್ ಹೈ ಎನ್ನುವ ಪರೋಕ್ಷ ಸಂದೇಶ ರವಾನಿಸಿದ್ದಾರೆ. ತಮ್ಮ ಬೆಂಬಲಗರನ್ನು ಸಹ ಡಿಕೆ ಶಿವಕುಮಾರ್ ಕಾರ್ಯಕ್ರಮಗಳಿಂದ ದೂರ ಇಡುವ ಮೂಲಕ ಸತೀಶ್ ಜಾರಕಿಹೊಳಿ, ಇಡೀ ಬೆಳಗಾವಿ ಜಿಲ್ಲೆ ತಮ್ಮ ಹಿಡಿತದಲ್ಲಿದೆ ಎನ್ನುವುದನ್ನು ಶಿವಕುಮಾರ್ಗೆ ಮನವರಿಕೆ ಮಾಡಿಕೊಟ್ಟಂತಿದೆ. ಒಟ್ಟಿನಲ್ಲಿ ಮೈತ್ರಿ ಸರ್ಕಾರವಿದ್ದಾಗ ರಮೇಶ್ ಜಾರಕಿಹೊಳಿ ಕಾಂಗ್ರೆಸ್ಗೆ ತಲೆನೋವು ಆಗಿದ್ದರು. ಇದೀಗ ಸತೀಶ್ ಜಾರಕಿಹೊಳಿ ಅಸಮಾಧಾನ ಕಾಂಗ್ರೆಸ್ ಗೆ ದೊಡ್ಡ ಟೆನ್ಷನ್ ತಂದೊಡ್ಡಿದೆ.