ಮೈಸೂರು : ಕರ್ನಾಟಕದ ವಿರುದ್ಧ ಕೇಂದ್ರ ಸರ್ಕಾರ ತಾರತಮ್ಯ ತೋರುತ್ತಿದ್ದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಆರೋಪಿಸಿದರು.
ನಗರದ ಜೆ.ಕೆ. ಮೈದಾನದ ಎಂಎಂಸಿ ಅಮೃತ ಮಹೋತ್ಸವ ಭವನದಲ್ಲಿ ಶುಕ್ರವಾರ ನಡೆದ ರೈತ ದಸರಾ ಹಾಗೂ ಪ್ರಗತಿಪರ ರೈತರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿ, ಕೇಂದ್ರ ಸರ್ಕಾರ ತಾತ್ಸಾರ ತೋರುತ್ತಿದ್ದರೂ ನಮ್ಮ ಸರ್ಕಾರವು ಕಾವೇರಿ ವಿಚಾರದಲ್ಲಿ ರೈತರ ಪರ ನಿಂತಿದ್ದೇವೆ. ನ್ಯಾಯಾಲಯ ಮತ್ತು ಕಾವೇರಿ ಮಂಡಳಿಗೆ ಗೌರವ ನೀಡಿದ್ದೇವೆ. ಹಾಗೆಯೇ, ಕುಡಿಯುವ ನೀರಿನ ಬಗ್ಗೆ ಬದ್ಧತೆ ತೋರಿದ್ದೇವೆ. ಆದರೆ, ಅವರಂತೆ ನಾವು ತಾತ್ಸಾರ ತೋರಿದ್ದರೆ, ರಾಜ್ಯ ಮತ್ತಷ್ಟು ಸಂಕಷ್ಟಕ್ಕೆ ತುತ್ತಾಗುತ್ತಿತ್ತು ಎಂದರು.
ಕಾವೇರಿ ಗಲಾಟೆ ವಿಚಾರದಲ್ಲಿ ಮೂರು ಬಾರಿ ಸರ್ವಪಕ್ಷಗಳ ಸಭೆ ಮಾಡಲಾಗಿದೆ. ಕಳೆದ ಎರಡು ತಿಂಗಳಿನಿಂದ ಪ್ರಧಾನಿ ಭೇಟಿಗೆ ಅವಕಾಶ ಕೇಳುತ್ತಿದ್ದರೂ ಈವರೆಗೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ರಾಜ್ಯದಲ್ಲಿ 27 ಮಂದಿ ಸಂಸದರಿದ್ದು, ಆದರೆ, ಅವರಿಗೆ ಕಾವೇರಿ ವಿಚಾರದಲ್ಲಿ ಆಸಕ್ತಿ ಇಲ್ಲ. ಕೇವಲ ಬಿಜೆಪಿ- ಜೆಡಿಎಸ್ ಮೈತ್ರಿ ಮಾಡಿಕೊಳಲ್ಳು ಆಸಕ್ತಿ ತೋರುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ 123 ವರ್ಷಗಳ ನಂತರ ಈ ರೀತಿ ಮಳೆ ಕೊರತೆ ಎದುರಿಸುತ್ತಿದ್ದೇವೆ. ಈ ನಡುವೇ ನಾನು ಕೃಷ್ಣ ಭೈರೇಗೌಡ, ಪ್ರಿಯಾಂಕ ಖರ್ಗೆ ಅವರು ಕೇಂದ್ರದ ಜಲಶಕ್ತಿ ಮಂತ್ರಿಗಳು ಮತ್ತು ಪ್ರಧಾನಿ ಆಪ್ತ ಕಾರ್ಯದರ್ಶಿಗಳ ಭೇಟಿಗೆ ಅವಕಾಶ ಕೇಳುತ್ತಿದ್ದು, ಕೇಂದ್ರ ಸಚಿವರು ಹಾಗೂ ಅಧಿಕಾರಿಗಳು ಸಹ ಭೇಟಿಗೆ ಅವಕಾಶ ನೀಡಲಿಲ್ಲ. ಇದು ಒಕ್ಕೂಟ ವ್ಯವಸ್ಥೆಯಲ್ಲಿ ದುರಂತ ಎಂದು ಅವರು ಕಿಡಿಕಾರಿದರು.
ಲೋಕಸಭಾ ಚುನಾವಣೆ ವೇಳೆ ಜನರು ಈ ಅಂಶಗಳನ್ನ ಗಮನಿಸಿ ಆಯ್ಕೆ ಮಾಡಬೇಕು. ಸುಳ್ಳು ಹೇಳುವವರ ಬಗ್ಗೆ ಜನರು ಸೂಕ್ಷ್ಮವಾಗಿ ಗಮನಿಸಬೇಕು. ವಾಸ್ತವತೆಯನ್ನ ತಿಳಿದುಕೊಳ್ಳಬೇಕು ಎಂದು ಅವರು ತಿಳಿಸಿದರು.