ಚಿಕ್ಕಮಗಳೂರು, ನ.16: ಮೂಡಿಗೆರೆ ತಾಲೂಕಿನ ಕುಂದೂರು ಅರಣ್ಯ ವ್ಯಾಪ್ತಿಯಲ್ಲಿ ಒಂಟಿ ಸಲಗ ಸೆರೆಯಾಗಿದೆ. ಅರವಳಿಕೆ ಮದ್ದು ನೀಡಿ ಕಾಡಾನೆಯನ್ನು ಸೆರೆ ಹಿಡಿಯಲಾಗಿದೆ. ಕಿಲ್ಲರ್ ಒಂಟಿ ಸಲಗ ಹಿಡಿಯಲು ಕಾರ್ಯಾಚರಣೆ ನಡೆಸುತ್ತಿದ್ದ ಟೀಂಗೆ ಮತ್ತೊಂದು ಒಂಟಿ ಸಲಗ ಸಿಕ್ಕಿಬಿದ್ದಿದೆ. ಸದ್ಯ ಇಬ್ಬರನ್ನ ಬಲಿ ಪಡೆದಿದ್ದ ಒಂಟಿ ಸಲಗ ಸೆರೆಗೆ ಕಾರ್ಯಾಚರಣೆ ಮುಂದುವರಿದಿದೆ. 7 ಆನೆಗಳ ಬಳಸಿ ಆಪರೇಷನ್ ಕಿಲ್ಲರ್ ಒಂಟಿ ಸಲಗ ಕಾರ್ಯಾಚರಣೆ ನಡೆಯುತ್ತಿದೆ.
ವಾರದ ಹಿಂದೆ ಹೆಡದಾಳು ಗ್ರಾಮದಲ್ಲಿ ಕಾರ್ಮಿಕ ಮಹಿಳೆ ಮೀನಾ(45)ಳನ್ನು ಆನೆ ತುಳಿದು ಕೊಂದು ಹಾಕಿತ್ತು. ಅರೆನೂರು ಗ್ರಾಮದಲ್ಲಿ ಕಿನ್ನಿ ಎಂಬ ವ್ಯಕ್ತಿಯನ್ನು ಬಲಿ ಪಡೆದಿತ್ತು. ಒಟ್ಟು ಎರಡು ತಿಂಗಳ ಅಂತರಲ್ಲಿ ಕಾಡಾನೆ ದಾಳಿಗೆ ಎರಡು ಸಾವು ಸಂಭವಿಸಿದೆ. ಹೀಗಾಗಿ ಇಬ್ಬರನ್ನ ಬಲಿ ಪಡೆದಿದ್ದ ಒಂಟಿ ಸಲಗದ ಸೆರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದು ಚಿಕ್ಕಮಗಳೂರು ವಲಯ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯಚರಣೆ ನಡೆಯುತ್ತಿದೆ. ಕಿಲ್ಲರ್ ಕಾಡಾನೆ ಬದಲಿಗೆ ಮತ್ತೊಂದು ಕಾಡಾನೆ ಸೆರೆಯಾಗಿದೆ. ಕುಂದೂರು ಅರಣ್ಯ ವ್ಯಾಪ್ತಿಯಲ್ಲಿ ಕಿಲ್ಲರ್ ಒಂಟಿ ಸಲಗಕ್ಕಾಗಿ ಆಪರೇಷನ್ ಮುಂದುವರೆದಿದೆ.
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಗ್ರಾಮದಲ್ಲಿ ಕಳೆದ ಮೂರು ತಿಂಗಳಿನಿಂದ ದಾಂದಲೆ ಎಬ್ಬಿಸಿ ಇಬ್ಬರ ಸಾವಿಗೆ ಕಾರಣವಾಗಿ ಕೋಟ್ಯಾಂತರ ಮೌಲ್ಯದ ಕಾಫಿ ಬಾಳೆ ,ತೆಂಗು, ಅಡಿಕೆ ಬೆಳೆ ನಾಶ ಮಾಡಿದ್ದ ಭುವನೇಶ್ವರಿ ಗ್ಯಾಂಗಿನ 1 ಒಂಟಿಸಲಗ ಸೆರೆ, 6 ಕಾಡಾನೆಗಳ ಸ್ಥಳಾಂತರಕ್ಕೆ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಚಿಕ್ಕಮಗಳೂರು ವಲಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಆದೇಶ ನೀಡಿದ್ದು ಕಾರ್ಯಚರಣೆಗಾಗಿ ಸಕ್ರೇಬೈಲು ಆನೆ ಶಿಬಿರದಿಂದ ಸೋಮಣ್ಣ, ಆಲೆ, ಬಹಾದ್ದೂರ್ ಆನೆಗಳು ಕಾರ್ಯಚರಣೆಗೆ ನಡೆಸುತ್ತಿವೆ. ಮತ್ತಾವರ ಗ್ರಾಮದಲ್ಲಿ 6 ಕಾಡಾನೆಗಳು ಹಿಂಡು ಬೀಡುಬಿಟ್ಟಿದ್ದು ರಾತ್ರಿ ಗ್ರಾಮಕ್ಕೆ ಎಂಟ್ರಿ ನೀಡಿ ಬೆಳೆ ನಾಶ ಮಾಡಿ ಬೆಳಗಾಗುತ್ತಿದ್ದಂತೆ ಕಾಡು ಸೇರುತ್ತಿವೆ. ಕಾರ್ಮಿಕ ಮಹಿಳೆಯನ್ನ ಹತ್ಯೆ ಮಾಡಿರುವ ಒಂಟಿ ಸಲಗ ಹತ್ಯೆ ಮಾಡಿದ ಸ್ಥಳದಿಂದ 50 ಕಿಮೀ ದೂರು ತೆರಳಿರುವ ಮಾಹಿತಿ ಇದೆ.