ಬಿಜೆಪಿ ಶಾಸಕಾಂಗ ಸಭೆಯಲ್ಲಿ ಪ್ರಭಾವಿ ಒಕ್ಕಲಿಗ ನಾಯಕನಾಗಿರುವ ಪದ್ಮನಾಭನಗರದ ಶಾಸಕ ಆರ್.ಅಶೋಕ್ ಅವರನ್ನು ಪ್ರತಿಪಕ್ಷದ ನಾಯಕರಾಗಿ ಘೋಷಣೆ ಮಾಡಲಾಗಿದೆ. ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಅಶೋಕ್ ಹೆಸರನ್ನು ಸೂಚಿಸಿದರೆ, ಶಾಸಕ ಸುನಿಲ್ ಕುಮಾರ್ ಇದಕ್ಕೆ ಅನುಮೋದನೆ ನೀಡಿದರು. ಕೊನೆಗೆ ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಈ ಹೆಸರಿಗೆ ಅನುಮೋದನೆ ನೀಡಿದರು.ವಿಪಕ್ಷ ನಾಯಕರಾಗಿ ಆರ್ ಅಶೋಕ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಅಶೋಕ್ ಅವರ ಆಯ್ಕೆ ಮೂಲಕ ಯಡಿಯೂರಪ್ಪ ಬಣ ಮೇಲುಗೈ ಸಾಧಿಸಿದಂತಾಗಿದೆ. ‘ಕಾಂಗ್ರೆಸ್ ದುರಾಡಳಿತ ಜನರ ಮುಂದೆ ಇಡಲಿದ್ದೇವೆ. ಮುಂಬರುವ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸೋಣ. ಒಂದು ಚುನಾವಣೆಯ ಸೋಲಿನಿಂದ ನಾವು ಹೆದರಿ ಕೂರೋದಿಲ್ಲ. ಹೈಕಮಾಂಡ್ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇವೆ’ ಎಂದು ಶಾಸಕಾಂಗ ಸಭೆಯಲ್ಲಿ ವಿಪಕ್ಷ ನಾಯಕನಾಗಿ ಆಯ್ಕೆಯಾದ ಬಳಿಕ ಆರ್.ಅಶೋಕ್ ಮಾತನಾಡಿದ್ದಾರೆ. ಅದರೊಂದಿಗೆ ಚುನಾವಣೆ ಮುಗಿದು ಆರು ತಿಂಗಳಾದ ಬಳಿಕ ಬಿಜೆಪಿ ತನ್ನ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕ ಇಬ್ಬರನ್ನೂ ಆಯ್ಕೆ ಮಾಡಿದೆ.
ಕೇಂದ್ರದ ವೀಕ್ಷಕರ ಸಮ್ಮುಖದಲ್ಲಿ ಶುಕ್ರವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಆರ್ ಅಶೋಕ್ ಅವರನ್ನು ಪ್ರತಿಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ಬಿಜೆಪಿಯ ಹಿರಿಯ ನಾಯಕರಾಗಿರುವ ಆರ್ ಅಶೋಕ್, ಉಪಮುಖ್ಯಮಂತ್ರಿಯಾಗಿ ವಿವಿಧ ಇಲಾಖೆಯಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಸದ್ಯ ಅವರು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ.
ಮಾತನಾಡಿದ ಅಶೋಕ್, ‘ನನ್ನ ಆಯ್ಕೆಮಾಡಿದ ವರಿಷ್ಠರಿಗೆ ಧನ್ಯವಾದಗಳು. ಪ್ರೀತಿಯಿಂದ ಪ್ರತಿಪಕ್ಷ ನಾಯಕ ನಾಗಿ ಆಯ್ಕೆ ಮಾಡಿದ್ದಾರೆ. ನಾನು ಸಾಮಾನ್ಯ ಕಾರ್ಯಕರ್ತ. 1975ರಲ್ಲಿ ತುರ್ತು ಪರಿಸ್ಥಿತಿಯಲ್ಲಿ ಹೋರಾಟ ಮಾಡಿದ್ದೆ. 20 ವರ್ಷ ಪಕ್ಷದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದೇನೆ. 7 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನನ್ನ ಆಯ್ಕೆ ಮಾಡಿದ ಪದ್ಮನಾಭ ನಗರ, ಉತ್ತರಹಳ್ಳಿ ಜನಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನನಗೆ ಮತ್ತು ವಿಜಯೇಂದ್ರ ಅವರಿಗೆ ಹೊಸ ಜವಾಬ್ದಾರಿ ನೀಡಲಾಗಿದೆ. ಮತ್ತೇ ಬಿಜೆಪಿ ಅಧಿಕಾರಕ್ಕೆ ತರುವ ಟಾಸ್ಕ್ ನಮಗೆ ವರಿಷ್ಠರು ನೀಡಿದ್ದಾರೆ. ಇಡೀ ರಾಜ್ಯ ಸುತ್ತಾಡುತ್ತೇವೆ. ಸದನದ ಒಳಗಡೆ ನಮಗೆ ನಿಜವಾದ ಚಾಲೆಂಜ್ ಇರುತ್ತದೆ’ ಎಂದು ಹೇಳಿದರು.