ಬಿಜೆಪಿಯವರು, ಕುಮಾರಸ್ವಾಮಿ ಏನೇ ಹೊಟ್ಟೆ ಹಿಸುಕಿಕೊಂಡರೂ ನಾವು ಐದು ವರ್ಷ ಅಧಿಕಾರದಲ್ಲಿ ಇದ್ದೇ ಇರುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಂಜನಗೂಡು ತಾಲೂಕು ಕಳಲೆ ಗ್ರಾಮದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅಂತಾ ಒಬ್ಬ ಇದ್ದಾನೆ. ಅವನಿಗೆ ಬರೀ ಹೊಟ್ಟೆ ಉರಿ. ನಾವು ಅಧಿಕಾರಕ್ಕೆ ಬಂದಿದ್ದೇವೆ ಅಂತಾ ಹೊಟ್ಟೆ ಕಿವುಚಿ ಕೊಳ್ಳುತ್ತಾನೆ. ಇಂಥವರ ಬಗ್ಗೆ ಬಿ ಕೇರ್ ಫ್ಹುಲ್ [ಎಚ್ಚರಿಕೆಯಿಂದಿರಿ]. ನಾವು ಇನ್ನೂ ಐದು ವರ್ಷ ಇದ್ದೇ ಇರುತ್ತೇವೆ. ಬಿಜೆಪಿ, ಕುಮಾರಸ್ವಾಮಿ ಏನೇ ಹೊಟ್ಟೆ ಹಿಸುಕಿಕೊಂಡರು ನಾವು ಐದು ವರ್ಷ ಇರುವುದಾಗಿ ಹೇಳಿದರು.
ಮೋದಿ ಕೈ ಬೀಸಿದ ಕೂಡಲೇ ಮತ ಬರಲ್ಲ. ಮೋದಿ ನಂಜನಗೂಡಿಗೆ ಬಂದು ಕೈ ಬೀಸಿ ಹೋದ ಮೇಲೆ ಕಾಂಗ್ರೆಸ್ ನಾ ಎಲ್ಲರೂ ಗೆದ್ದರು. ನಾನು ಗೆದ್ದೆ, ದರ್ಶನ್ ಧ್ರುವನಾರಾಯಣ್, ಅನಿಲ್ ಚಿಕ್ಕಮಾದು ಗೆದ್ದ. ಎಲ್ಲರೂ ದೊಡ್ಡ ಲೀಡ್ ನಲ್ಲೆ ಗೆದ್ವಿ. ಉಚಿತ ಯೋಜನೆಗಳನ್ನು ಮೋದಿ ಅಣಕಿಸಿದ್ದರು. ಈಗ ಎಲ್ಲಾ ಕಡೆ ಉಚಿತ ಯೋಜನೆ ಘೋಷಣೆ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು. ಗ್ಯಾರಂಟಿ ಜಾರಿ ಆದರೆ ರಾಜ್ಯ ಆರ್ಥಿಕ ದಿವಾಳಿ ಆಗುತ್ತೆ ಅಂತಾ ಮೋದಿ ಹೇಳಿದ್ದರು. ಗ್ಯಾರಂಟಿ ಜಾರಿ ಮಾಡಿದ ಮೇಲೂ ರಾಜ್ಯ ಅರ್ಥಿಕವಾಗಿ ಸದೃಢ ವಾಗಿದೆ ಎಂದರು.