‘ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನನ್ನನ್ನು ಭೇಟಿ ಮಾಡಿದ್ದು ನಿಜ. ಕಾಂಗ್ರೆಸ್ಗೆ ಬರುವಂತೆ ಮತ್ತೊಮ್ಮೆ ಆಫರ್ ನೀಡಿದ್ದಾರೆ. ಆದರೆ, ನಾನು ಇದನ್ನು ತಳ್ಳಿ ಹಾಕಿದ್ದೇನೆ. ಜೆಡಿಎಸ್ ಬಿಟ್ಟು ಬರುವುದಿಲ್ಲ ಎಂದು ಅವರಿಗೆ ತಿಳಿಸಿದ್ದೇನೆ’ ಎಂದು ಜೆಡಿಎಸ್ ಶಾಸಕ ಹಾಗೂ ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಕುಮಾರ್ರನ್ನು ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಸೇರಿದಂತೆ ಇತರೆ ಶಾಸಕರು ಭೇಟಿಯಾಗಲು ಆಗಮಿಸಿದ್ದರು. ಭೇಟಿಯ ಸಂದರ್ಭದಲ್ಲಿ, ‘ಈಗಲೂ ಅವಕಾಶ ಇದೆ, ಕಾಂಗ್ರೆಸ್ಗೆ ಬರುವ ಮನಸು ಮಾಡಿ’ ಎಂದರು. ಆದರೆ, ನಾನು ಇದನ್ನು ತಳ್ಳಿ ಹಾಕಿದೆ. ಜೆಡಿಎಸ್ ಬಿಟ್ಟು ಬರುವುದಿಲ್ಲ ಎಂದು ಅವರಿಗೆ ತಿಳಿಸಿದೆ ಎಂದು ಸ್ಪಷ್ಟಪಡಿಸಿದರು.
‘ಶಿವಕುಮಾರ್ ಅವರು ನಮ್ಮದೇ ಸರ್ಕಾರ ಇದ್ದು, ನಿಮಗೂ ಅಧಿಕಾರದ ಅವಕಾಶ ಸಿಗಲಿದೆ ಎಂದಿದ್ದಾರೆ. ಅದಕ್ಕೆ, ನಾನು ಕೋರ್ ಕಮಿಟಿ ಅಧ್ಯಕ್ಷನಾಗಿ ಜೆಡಿಎಸ್ ಪಕ್ಷವನ್ನು ಕಟ್ಟುತ್ತಿದ್ದೇನೆ. ನಿಮ್ಮಲ್ಲಿಯೇ 135 ಶಾಸಕರು ಇದ್ದು, ಶಾಸಕರನ್ನು ಸೇರಿಸಿಕೊಳ್ಳುವ ಅಗತ್ಯ ಬರಲ್ಲ ಎಂಬುದಾಗಿ ತಿಳಿಸಿದ್ದೇನೆ’ ಎಂದರು. ಅಲ್ಲದೇ, ‘ಈ ಹಿಂದೆಯೂ ಶಿವಕುಮಾರ್ ಅವರು ನನ್ನನ್ನು ಕಾಂಗ್ರೆಸ್ಗೆ ಕರೆದಿದ್ದರು. ಅವರ ಅಧ್ಯಕ್ಷ ಸ್ಥಾನ ಹೋದರೂ ಎರಡು ಸ್ಥಾನ ಕೊಡಿಸುತ್ತೇನೆ ಎಂದಿದ್ದರು. ಬಿಜೆಪಿಯಲ್ಲಿ ಉಪಮುಖ್ಯಮಂತ್ರಿ ಸ್ಥಾನ ಕೊಡುವುದಾಗಿ ಹೇಳಿದ್ದರೂ ಆ ಪಕ್ಷಕ್ಕೆ ಹೋಗಿಲ್ಲ. ಈಗ ಕಾಂಗ್ರೆಸ್ಗೂ ಹೋಗಲ್ಲ ಎಂದು ತಿಳಿಸಿದ್ದೇನೆ. ಕಾಂಗ್ರೆಸ್ಗೆ ಹೋಗುತ್ತೇನೆ ಎಂಬ ಯೋಚನೆಯೂ ಇಲ್ಲ ಎಂದಿದ್ದೇನೆ’ ಎಂದರು̤