ಆಧುನಿಕ ವೈದ್ಯ ಪದ್ಧತಿಗಳ ವಿರುದ್ಧ ತಪ್ಪುದಾರಿಗೆಳೆವ ಹೇಳಿಕೆ ನೀಡುವುದು ಹಾಗೂ ಜಾಹೀರಾತು ಪ್ರಕಟಿಸುವುದನ್ನು ತಕ್ಷಣವೇ ನಿಲ್ಲಿಸುವಂತೆ ಬಾಬಾ ರಾಮ ದೇವ್ ಅವರ ಪತಂಜಲಿ ಆಯುರ್ವೇದ ಕಂಪನಿಗೆ ಸುಪ್ರೀಂ ಕೋರ್ಟ್ ಎಚ್ಚರಿಸಿದೆ. ಇಲ್ಲದಿದ್ದರೆ ಪತಂಜಲಿಯ ಪ್ರತಿ ಉತ್ಪನ್ನದ ಮೇಲೆ ತಲಾ 1 ಕೋಟಿ ರು. ದಂಡ ವಿಧಿಸುವುದಾಗಿ ಎಚ್ಚರಿಸಿದೆ.
‘ಪತಂಜಲಿ ಔಷಧ ಉತ್ಪನ್ನಗಳ ಜಾಹೀರಾತುಗಳು ತಪ್ಪು ದಾರಿಗೆ ಎಳೆಯುವಂತವು. ವಿಶೇಷವಾಗಿ ಕೋವಿಡ್ ಲಸಿಕೆ ವಿರುದ್ಧ ಹಾಗೂ ಆಧುನಿಕ ಔಷಧ ಪದ್ಧತಿ ಅಲೋಪತಿ ವಿರುದ್ಧ ಪತಂಜಲಿ ಜಾಹೀರಾತು ಪ್ರಕಟಿಸಿದೆ ಹಾಗೂ ಅದರ ಮುಖ್ಯಸ್ಥ ಬಾಬಾ ರಾಮದೇವ್ ಹೇಳಿಕೆ ನೀಡಿದ್ದಾರೆ’ ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ಪೀಠ, ‘ಪತಂಜಲಿ ಇಂತಹ ಸುಳ್ಳು ಮತ್ತು ದಾರಿ ತಪ್ಪಿಸುವ ಜಾಹೀರಾತು (ADVT) ತಕ್ಷಣವೇ ನಿಲ್ಲಿಸಬೇಕು. ನಿಲ್ಲಿಸದೇ ಹೋದರೆ ‘ನಿರ್ದಿಷ್ಟ ರೋಗ ಗುಣಪಡಿಸಬಹುದು’ ಎಂಬ ಸುಳ್ಳು ಜಾಹೀರಾತಿನ ಪ್ರತಿ ಉತ್ಪನ್ನದ ಮೇಲೆ 1 ಕೋಟಿ ರು. ದಂಡ ಹಾಕಬೇಕಾಗುತ್ತದೆ’ ಎಂದಿತು.