ನೆಟ್ಟಕಲ್ಲಪ್ಪ ಈಜು ಕೇಂದ್ರ(ಎನ್ಎಸಿ) ಆಯೋಜಿಸುವ 2ನೇ ಆವೃತ್ತಿಯ ರಾಷ್ಟ್ರೀಯ ಈಜು ಸ್ಪರ್ಧೆ ಶನಿವಾರ ಹಾಗೂ ಭಾನುವಾರ ನಗರದಲ್ಲಿ ನಡೆಯಲಿದೆ. ಪದ್ಮನಾಭ ನಗರದಲ್ಲಿರುವ ಎನ್ಎಸಿ ಈಜುಕೊಳದಲ್ಲಿ ಸ್ಪರ್ಧೆಗಳು ನಡೆಯಲಿವೆ. ಶನಿವಾರ ಸಂಜೆ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಕೂಟಕ್ಕೆ ಚಾಲನೆ ನೀಡಲಿದ್ದಾರೆ. ಕೂಟದಲ್ಲಿ ವಿವಿಧ ರಾಜ್ಯಗಳ 153 ಪುರುಷರು ಮತ್ತು 97 ಮಹಿಳೆಯರು ಸೇರಿ 250 ಈಜುಪಟುಗಳು ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕದಿಂದ ನೂರಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಲಿದ್ದು, ಒಲಿಂಪಿಯನ್ ಶ್ರೀಹರಿ ನಟರಾಜ್, ಸಾಜನ್ ಪ್ರಕಾಶ್, ಶಿವ ಶ್ರೀಧರ್, ರಿಧಿಮಾ, ಎ.ಎಸ್.ಆನಂದ್, ನೀನಾ ವೆಂಕಟೇಶ್, ಎಸ್.ಪಿ.ಲಿಖಿತ್, ಹರ್ಷಿತಾ ಜಯರಾಮ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಈಜುಪಟುಗಳು ಕೂಟದಲ್ಲಿ ಸ್ಪರ್ಧಿಸಲಿದ್ದಾರೆ.