ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಅವರು ಡಿ.1ರಂದು ಶುಕ್ರವಾರ ಪಕ್ಷದ ವರಿಷ್ಠರನ್ನು ಭೇಟಿ ಮಾಡುವ ಸಂಬಂಧ ದೆಹಲಿಗೆ ತೆರಳಲಿದ್ದಾರೆ. ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದ ಬಳಿಕ ಮತ್ತು ಅಶೋಕ್ ಅವರು ಪ್ರತಿಪಕ್ಷದ ನಾಯಕರಾದ ನಂತರ ಇದೇ ಮೊದಲ ಬಾರಿಗೆ ದೆಹಲಿಗೆ ಭೇಟಿ ನೀಡುತ್ತಿದ್ದಾರೆ.
ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ಧನ್ಯವಾದ ತಿಳಿಸುವುದರ ಜತೆಗೆ ಕೋರ್ ಕಮಿಟಿ ಪುನಾರಚನೆ, ರಾಜ್ಯ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ, ವಿಧಾನಸಭೆಯ ಉಪನಾಯಕ, ಮುಖ್ಯ ಸಚೇತಕ, ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ, ಉಪನಾಯಕ ಮತ್ತು ಮುಖ್ಯ ಸಚೇತಕ ಹುದ್ದೆಗಳಿಗೆ ಯಾರನ್ನು ಆಯ್ಕೆ ಮಾಡಬೇಕು ಎಂಬುದರ ಬಗ್ಗೆ ಸಮಾಲೋಚನೆ ನಡೆಸುವ ಸಾಧ್ಯತೆಯಿದೆ ಎಂದು ಮುೂಲಗಳು ತಿಳಿಸಿವೆ.
ಅಲ್ಲದೆ, ಉಭಯ ನಾಯಕರ ನೇಮಕಕ್ಕೆ ಸಂಬಂಧಿಸಿದಂತೆ ಬೃಹತ್ ಸಮಾವೇಶ ಆಯೋಜಿಸುವ ಉದ್ದೇಶವನ್ನು ಹೊಂದಲಾಗಿದೆ. ಹೀಗಾಗಿ, ಈ ಸಮಾವೇಶದ ದಿನಾಂಕ, ರಾಷ್ಟ್ರೀಯ ನಾಯಕರ ಲಭ್ಯತೆ ಆಧರಿಸಿ ಅವರನ್ನು ಆಹ್ವಾನಿಸುವ ಬಗ್ಗೆಯೂ ಚರ್ಚೆ ನಡೆಯುವ ನಿರೀಕ್ಷೆಯಿದೆ.
ಜತೆಗೆ ಪಕ್ಷದ ಸಂಘಟನೆ ಬಲಪಡಿಸುವ ಕುರಿತಂತೆ ಹೋರಾಟಗಳನ್ನು ಹಮ್ಮಿಕೊಳ್ಳುವ ಬಗ್ಗೆ ವರಿಷ್ಠರಿಂದ ಸಲಹೆ- ಸೂಚನೆಗಳನ್ನು ಪಡೆಯಬಹುದು. ಮುಖ್ಯವಾಗಿ ಪಕ್ಷ ತೊರೆಯಲು ಸಜ್ಜಾಗಿರುವ ಕೆಲವು ನಾಯಕರನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದರ ಬಗ್ಗೆ ವಿಜಯೇಂದ್ರ ಅವರು ವರಿಷ್ಠರೊಂದಿಗೆ ಮಾತುಕತೆ ನಡೆಸುವ ಸಂಭವ ಹೆಚ್ಚಾಗಿದೆ ಎನ್ನಲಾಗಿದೆ.