ಚಿಕ್ಕಮಗಳೂರು: ಗುರುವಾರ ಸಾಯಂಕಾಲ ಚಿಕ್ಕಮಗಳೂರು ಪೊಲೀಸ್ ಠಾಣೆಯಲ್ಲಿ ಹೆಲ್ಮಟ್ ವಿಚಾರಕ್ಕೆ ಸಂಬಂಧಿಸಿದಂತೆ ವಕೀಲ ಪ್ರೀತಮ್ ಅನ್ನುವವರ ಮೇಲೆ ಗಂಭೀರ ಸ್ವರೂಪದ ಹಲ್ಲೆ ನಡೆಸಿರುವ ಒಬ್ಬ ಪೊಲೀಸ್ ಇನ್ಸ್ ಪೆಕ್ಟರ್ (PSI), ಒಬ್ಬ ಎಎಸ್ ಐ, ಒಬ್ಬ ಹೆಡ್ ಕಾನ್ ಸ್ಟೇಬಲ್ ಹಾಗೂ ಮೂವರು ಪೊಲೀಸ್ ಪೇದೆಗಳನ್ನು ವಿರುದ್ಧ ಐಪಿಸಿ 307, 324, 504 ಮತ್ತು 506 ಸೆಕ್ಷನ್ ಗಳ ಅಡಿ ಎಫ್ ಐ ಆರ್ ದಾಖಲಿಸಿಕೊಂಡು ಸಸ್ಪೆಂಡ್ ಮಾಡಲಾಗಿದೆ ಮತ್ತು ಅವರ ವಿರುದ್ಧ ಇಲಾಖಾ ತನಿಖೆ ನಡೆಸುವ ಆದೇಶ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರ ಆಮ್ಟೆ ಹೇಳಿದರು. ಘಟನೆಯ ಬಗ್ಗೆ ಮಾಧ್ಯಮಗಳಿಗೆ ವಿವರಣೆ ನೀಡಿದ ಆಮ್ಟೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರೀತಮ್ ಅವರನ್ನು ಭೇಟಿಯಾಗಿ ಚಿಕ್ಕಮಗಳೂರಿನ ಡಿವೈ ಎಸ್ ಪಿ ಹೇಳಿಕೆ ಪಡೆದುಕೊಂಡ ಬಳಿಕ ಕ್ರಮ ಜರುಗಿಸಲಾಗಿದೆ, ತಮ್ಮ ದೂರಿನಲ್ಲಿ ವಕೀಲರು ಇಬ್ಬರ ಹೆಸರು ಮಾತ್ರ ಹೇಳಿದ್ದು ಇನ್ನಿತರರಿಂದ ಹಲ್ಲೆಯಾಗಿದೆ ಅಂತ ಹೇಳಿದ್ದಾರೆ ಎಂದರು. ಬಾರ್ ಕೌನ್ಸಿಲ್ ಸದಸ್ಯರೊಂದಿಗೆ ಮಾತುಕತೆ ನಡೆದಿದ್ದು ಅವರು ತಪ್ಪಿತಸ್ಥ ಪೊಲೀಸ್ ಸಿಬ್ಬಂದಿಯನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ ಎಂದು ಎಸ್ ಪಿ ಆಮ್ಟೆ ಹೇಳಿದರು.