ಮೈಸೂರು: ಚಾಮುಂಡಿ ಬೆಟ್ಟ ಐತಿಹಾಸಿಕ ಸ್ಥಳವಾಗಿದ್ದು ದೇಶದ ವಿವಿಧ ಮೂಲೆಗಳಿಂದ ಜನರು ತಾಯಿಯ ದರ್ಶನ ಪಡೆಯಲು ಬರುತ್ತಾರೆ. ಆದರೆ, ಅನೇಕ ಪ್ರವಾಸಿಗರು ಇಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಾರೆ. ಇದಕ್ಕೆ ಅರಣ್ಯ ಇಲಾಖೆ ಬ್ರೇಕ್ ಹಾಕಿದ್ದು, ಕಾನೂನುಬಾಹಿರ ಚಟುವಟಿಕೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಲು ಶುರು ಮಾಡಿದೆ. ಐತಿಹಾಸಿಕ ಚಾಮುಂಡಿ ಬೆಟ್ಟವು ಅರಣ್ಯ ಪ್ರದೇಶಕ್ಕೆ ಒಳಪಡುತ್ತೆ. ಇದು ಸಾಕಷ್ಟು ವನ್ಯಜೀವಿಗಳಿಗೆ ಆಶ್ರಯದ ತಾಣವಾಗಿದೆ. ಆದ್ರೆ, ಇತ್ತೀಚಿಗೆ ಬೆಟ್ಟದಲ್ಲಿ ಅಕ್ರಮ ಚಟುವಟಿಕೆ ನಡೆಯುವುದು ಹಾಗೂ ಕಸವನ್ನ ಎಲ್ಲೆಂದರಲ್ಲಿ ಬಿಸಾಡುವ ಅನೈತಿಕ ಪ್ರಸಂಗಗಳು ಹೆಚ್ಚಾಗಿರುವುದು ಬೇಸಾರದ ಸಂಗತಿ.
ಇದಕ್ಕೆ ಕಡಿವಾಣ ಹಾಕಲು ಅರಣ್ಯ ಇಲಾಖೆ ಈಗಾಗಲೇ ಮುಂದಾಗಿದ್ದು, ಕಾನೂನು ಬಾಹಿರ ಚಟುವಟಿಕೆ ಮಾಡಿದವರ ವಿರುದ್ಧ ಬರೋಬ್ಬರಿ 290 ಪ್ರಕರಣಗಳನ್ನು ದಾಖಲು ಮಾಡಿಕೊಂಡಿದೆ. ಇದರಲ್ಲಿ 140 ಪ್ರಕರಣಗಳಿಗೆ ಶೂನ್ಯ ದಂಡ ವಿಧಿಸಲಾಗಿದೆ. ಮೊದಲಿಗೆ ಶೂನ್ಯದಂಡ ರಶೀದಿ ನೀಡಿ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಲಾಗಿದೆ. ಬಳಿಕ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ಹಾಕಿ ಬರೋಬ್ಬರಿ 1,07,500 ರೂ ವಸೂಲಿ ಮಾಡಲಾಗಿದೆ. ಇದರಲ್ಲಿ ಬೆಟ್ಟಕ್ಕೆ ಹೋಗುವ ಮಧ್ಯದಲ್ಲಿ ವಾಹನ ನಿಲ್ಲಿಸಿಕೊಂಡು ಅಡ್ಡಾಡುತ್ತಿದ್ದ 62 ಪ್ರಕರಣದಿಂದ 62 ಸಾವಿರ ರೂ, ಅನಧಿಕೃತ ಅರಣ್ಯ ಪ್ರವೇಶ ಪ್ರಕರಣಗಳಲ್ಲಿ 88 ಪ್ರಕರಣ ಪತ್ತೆ ಮಾಡಿ 44 ಸಾವಿರ ರೂ., ಬೆಟ್ಟದಲ್ಲಿ ತ್ಯಾಜ್ಯ ಬಿಸಾಡಿರುವ ಒಂದು ಪ್ರಕರಣದಲ್ಲಿ 500 ರೂ. ಹಾಗೂ ಅನುಚಿತ ವರ್ತನೆ ಹಾಗೂ ವನ್ಯಜೀವಿಗಳಿಗೆ ಹಾನಿ ಮಾಡಿದ ಒಂದು ಕೇಸಿನಲ್ಲಿ ಒಂದು ಸಾವಿರ ರೂ. ದಂಡವನ್ನು ವಿಧಿಸಲಾಗಿದೆ.