ಚಿಕ್ಕಮಗಳೂರು(ಡಿ.20): ಶಾಲೆಗೆ ತೆರಳಲು ಬಸ್ ಕಾಯುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದ ಬಾಲಕಿ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಮೂಡಿಗೆರೆ ತಾಲೂಕಿನ ದಾರದಹಳ್ಳಿ ಸರ್ಕಲ್ ಬಳಿ ಇಂದು(ಬುಧವಾರ) ನಡೆದಿದೆ.
ಮೂಡಿಗೆರೆ ತಾಲೂಕಿನ ಜೊಗಣ್ಣನಕೆರೆ ಗ್ರಾಮದ ಕೆಸವಳಲು ಸಮೀಪದ ಸೃಷ್ಟಿ(13) ಮೃತ ಶಾಲಾ ಬಾಲಕಿಯಾಗಿದ್ದು, ದಾರದಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7 ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಸೃಷ್ಟಿ ಗ್ರಾಮದ ಅರ್ಜುನ ಹಾಗೂ ಸುಮ ದಂಪತಿಗಳ ಮಗಳಾಗಿದ್ದು, ಇಂದು ಬೆಳಿಗ್ಗೆ ಶಾಲೆಗೆ ಹೊಗಲು ದಾರದಹಳ್ಳಿ ಸರ್ಕಲ್ ಬಳಿ ಕುಸಿದು ಬಿದ್ದಿದ್ದಾಳೆ.
ಕೂಡಲೇ ಮೂಡಿಗೆರೆ ಎಂ.ಜಿ.ಎಂ ಆಸ್ಪತ್ರೆಗೆ ಬಾಲಕಿಯನ್ನು ರವಾನಿಸಿದ್ದಾರೆ. ಆದರೆ ಸ್ಥಳದಲ್ಲೆ ತೀವ್ರ ಹೃದಯಾಘಾತದಿಂದ ನಿಧನ ಹೊಂದಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮೃತ ವಿದ್ಯಾರ್ಥಿನಿಯ ಪಾರ್ಥಿವ ಶರೀರವನ್ನು ಕೆಸವಳಲಿಗೆ ತೆಗೆದುಕೊಂಡು ಹೊಗಲಾಗಿದೆ. ತಾಯಿ ತಂದೆ ಇಬ್ಬರು ಸಹೋದರಿಯರು ಒಬ್ಬ ಸಹೊದರರನ್ನು ಸೃಷ್ಟಿ ಅಗಲಿದ್ದಾಳೆ.