ಹಿಜಾಬ್ ವಾಪಸ್ ಪಡೆಯುವುದರ ವಿರುದ್ಧ ಬಿಜೆಪಿ ಹೋರಾಟ ಮಾಡುವ ಅಗತ್ಯವಿಲ್ಲ. ಇದೊಂದು ಭಂಡ ಸರ್ಕಾರ, ತಮ್ಮ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲು ಆಗದೇ ಇಂತಹ ಕೆಲಸಕ್ಕೆ ಕೈಹಾಕಿ ಜನರ ದಾರಿ ತಪ್ಪಿಸುತ್ತಿದ್ದಾರೆ ಅಷ್ಟೇ. ಇದನ್ನು ಯಾರೂ ಒಪ್ಪುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಎಲ್ಲರೂ ಒಂದೇ ತಾಯಿ ಮಕ್ಕಳಂತೆ ಬಾಳಬೇಕು ಎಂದು ಆಶಿಸುವ ಪಕ್ಷ ಬಿಜೆಪಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಜಾಬ್ ನಿಷೇಧವನ್ನು ವಾಪಸ್ ಪಡೆಯಲು ಹೊರಟಿರುವ ನಡೆಯನ್ನು ನಾನು ಖಂಡಿಸುತ್ತೇನೆ” ಎಂದು ಹೇಳಿದರು.
“ಶಾಲಾ, ಕಾಲೇಜು ಮಕ್ಕಳು ಒಂದೇ ಸಮಾನವಾಗಿ ಇರಬೇಕು. ಇದನ್ನು ಧಿಕ್ಕರಿಸಿ ಅಲ್ಪಸಂಖ್ಯಾತರನ್ನು ತೃಪ್ತಿಪಡಿಸುವುದನ್ನು ಕಾಂಗ್ರೆಸ್ ಬಿಡಬೇಕು. ಹಿಜಾಬ್ ರದ್ದು ಮಾಡುವಂತೆ ಯಾವ ಮುಸ್ಲಿಂ ನಾಯಕರು ಕೇಳಿದ್ದರು? ಇಂತಹ ಡೊಂಬರಾಟವನ್ನು ಮುಖ್ಯಮಂತ್ರಿಗಳು ಬಿಡಬೇಕು” ಎಂದು ಹರಿಹಾಯ್ದರು.
”ಸಿದ್ದರಾಮಯ್ಯ ಅವರು ಹೀಗೆ ನಡೆದುಕೊಂಡರೆ ಅಲ್ಪಸಂಖ್ಯಾತರನ್ನು ತೃಪ್ತಿಪಡಿಸಲು ಆಗುವುದಿಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನರು ನಿಮಗೆ ತಕ್ಕ ಪಾಠ ಕಲಿಸುತ್ತಾರೆ. ಈಗಲಾದ್ರೂ ಸಿದ್ದರಾಮಯ್ಯ ಜಾಗೃತರಾಗಿ ತಮ್ಮ ನಿರ್ಧಾರದಿಂದ ಹಿಂದೆ ಸರಿಯಬೇಕು” ಎಂದು ಒತ್ತಾಯಿಸಿದರು.
ಮೈಸೂರಿನ ಕಲವಂದೆಯಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಅವರು, “ಹಿಜಾಬ್ ನಿಷೇಧ ವಾಪಸ್ ಪಡೆಯಲು ಸೂಚಿಸಿದ್ದೇನೆ. ಉಡುಪು, ಆಹಾರ ಪದ್ಧತಿ, ಅವು ನಿಮ್ಮ ಆಯ್ಕೆ. ನಾನೇಕೆ ಇವುಗಳಿಗೆ ಅಡ್ಡಿಯಾಗಲಿ? ನೀವು ಬಯಸಿದ ಉಡುಪನ್ನು ಧರಿಸಿ, ನಿಮಗೆ ಬೇಕಾದದ್ದನ್ನು ತಿನ್ನಿ. ನನಗೆ ಬೇಕೆನಿಸಿದ್ದನ್ನು ನಾನು ತಿನ್ನುವೆ. ಉಡುಪು, ಆಹಾರ ಅವರವರ ಇಷ್ಟ ಮತ್ತು ಹಕ್ಕು. ಇದು ತುಂಬಾ ಸರಳ, ಓಟಿಗಾಗಿ ರಾಜಕಾರಣ ಮಾಡಬಾರದು. ನಾವು ಅಂತಹ ರಾಜಕಾರಣ ಮಾಡುವುದಿಲ್ಲ” ಎಂದಿದ್ದರು.