ದೇವಸ್ಥಾನದ ಬಳಿ ಅಂದಕಾಸುರನ ರಂಗೋಲಿ ತುಳಿದು, ಅಳಿಸಿ ಆಚರಿಸಲಾಗುವ ‘ಸಂಹಾರ ದಿನ’ ಆಚರಣೆಗೆ ದಸಂಸ ವಿರೊಧ ವ್ಯಕ್ತಪಡಿಸಿದೆ. ಈ ವೇಳೆ, ದಸಂಸ ಕಾರ್ಯಕರ್ತರು ಮತ್ತು ಭಕ್ತರ ನಡುವೆ ಘರ್ಷಣೆ ನಡೆದಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ನಡೆಇದೆ..
ಮಹಿಷಾಸುರನ ಮತ್ತೊಂದು ಹೆಸರೆಂದು ಪರಿಗಣಿಸಲಾಗಿರುವ ಅಂದಕಾಸುರನ ಚಿತ್ರವನ್ನು ನಂಜನಗೂಡಿನ ದೇವಸ್ಥಾನದ ಆವರಣದಲ್ಲಿ ರಂಗೋಲಿಯಲ್ಲಿ ಬಿಡಿಸಲಾಗುತ್ತದೆ. ಬಳಿಕ, ನಂಜುಂಡೇಶ್ವರ, ಪಾರ್ವತಿ ಉತ್ಸವ ಮೂರ್ತಿಗಳನ್ನು ಹೊತ್ತವರು ಅಂದಕಾಸುರ ಚಿತ್ರವನ್ನು ಕಾಲಿನಲ್ಲಿ ಕುಳಿದು ಅಳಿಸುತ್ತಾರೆ. ಈ ಆಚರಣೆಯು ಮೂಲ ವಾಸಿಗಳಾದ ದ್ರಾವಿಡರ ಭಾವನೆಗಳಿಗೆ ಧಕ್ಕೆ ತರುತ್ತದೆಂದು ದಸಂಸ ವಿರೋಧ ವ್ಯಕ್ತಪಡಿಸಿದೆ.
ಮಹಿಷಾಸುರ ಜನಪರ ದ್ರಾವಿಡ ರಾಜನಾಗಿದ್ದ. ಹಲವರು ಮಹಿಷಾಸುರನನ್ನು ಪೂಜಿಸುತ್ತಾರೆ. ಆತನ ಚಿತ್ರವನ್ನು ತುಳಿದು, ಅಳಿಸುವುದು ದಲಿತರು ಸೇರಿದಂತೆ ಹಲವರ ಭಾವನೆಗಳಿಗೆ ಧಕ್ಕೆ ತರುತ್ತವೆ. ಈ ಆಚರಣೆಯನ್ನು ನಿಲ್ಲಿಸಬೇಕೆಂದು ದಸಂಸ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಈ ವೇಳೆ, ದಸಂಸ ಕಾರ್ಯಕರ್ತರು ಮತ್ತು ಭಕ್ತರ ನಡುವೆ ಮಾತಿನ ಚಕಮಕಿ ನಡೆದಿದೆ. “ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು ಬಿಡುವಂತಿಲ್ಲ” ಎಂದು ದೇವಸ್ಥಾನದ ಅರ್ಚಕರು ಸಮಜಾಯಿಷಿ ನೀಡಿದ್ದಾರೆ.
ಮೆರವಣಿಗೆ ಸಮಯದಲ್ಲಿ ನಂಜುಂಡೇಶ್ವರ ಮೂರ್ತಿಗೆ ಎಂಜಲು ನೀರು ಎರಚಲಾಗಿದೆ ಎಂದೂ ಕೂಡ ಕೆಲವು ಭಕ್ತರು ಆರೋಪಿಸಿದ್ದಾರೆ. ಆರೋಪ ಸಂಬಂಧ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಎಂಬವರು ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.