ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ದಟ್ಟವಾದ ಮಂಜು ಆವರಿಸಿದ್ದು 110ಕ್ಕೂ ಹೆಚ್ಚು ವಿಮಾನಗಳು ಹಾಗೂ 25 ರೈಲುಗಳ ಸಂಚಾರಕ್ಕೆ ತೊಂದರೆಯುಂಟಾಗಿದೆ. ಗೋಚರತೆ ಪ್ರಮಾಣ ಕೇವಲ 25ಕ್ಕೆ ಕುಸಿದ ಕಾರಣ ಸಾಮಾನ್ಯ ಸಂಚಾರಕ್ಕೂ ಅಡ್ಡಿಯುಂಟಾಗಿದೆ.
ಹವಮಾನ ಇಲಾಖೆ “ಅತ್ಯಂತ ದಟ್ಟವಾದ ಮಂಜು” ಎಂಬ ಮುನ್ನೆಚ್ಚರಿಕೆ ಸಂದೇಶ ಜಾರಿಗೊಳಿಸಿದ್ದು, ಶೀತ ಗಾಳಿ ಪರಿಸ್ಥಿತಿ ಮುಂದುವರೆದಿದೆ.
ರಸ್ತೆಯಲ್ಲೆಲ್ಲ ದಟ್ಟ ಮಂಜು ಆವರಿಸಿದ್ದು, ಉತ್ತರ ಪ್ರದೇಶದ ಹಲವು ಕಡೆ ಅಪಘಾತಗಳ ಬಗ್ಗೆ ವರದಿಯಾಗಿದೆ. ಆಗ್ರಾ – ಲಖನೌ ಎಕ್ಸ್ಪ್ರೆಸ್ವೇನಲ್ಲಿ ಸರಣಿ ಅಪಘಾತವುಂಟಾಗಿ ಓರ್ವ ಮೃತಪಟ್ಟು, 12 ಮಂದಿ ಗಾಯಗೊಂಡಿದ್ದಾರೆ. ಬರೇಲಿಯಲ್ಲಿನ ಬರೇಲಿ – ಸುಲ್ತಾನ್ಪುರ ಹೆದ್ದಾರಿಯಲ್ಲಿ ವೇಗವಾಗಿ ಬಂದ ಟ್ರಕ್ ಮನೆಯೊಂದಕ್ಕೆ ಗುದ್ದಿದೆ.
ಹರ್ಯಾಣ, ಉತ್ತರ ಪ್ರದೇಶ, ರಾಜಸ್ಥಾನ ಹಾಗೂ ಮಧ್ಯ ಪ್ರದೇಶದಲ್ಲಿ ಅತೀ ದಟ್ಟವಾದ ಮಂಜಿನ ಪರಿಸ್ಥಿತಿಗಳು ನಿರ್ಮಾಣವಾಗಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದೆಹಲಿಯಲ್ಲಿ ಸಫ್ಜರ್ಜಂಗ್ ವೀಕ್ಷಣಾಲಯ 50 ಮೀಟರ್ ಗೋಚರತೆ ದಾಖಲಿಸಿದರೆ, ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕೇವಲ 25 ಮೀಟರ್ ಗೋಚರತೆಗೆ ಇಳಿದಿದೆ. ಆದಾಗ್ಯೂ, ರಾಷ್ಟ್ರರಾಜದಾನಿಯ ಹಲವು ಕಡೆ ಕಡಿಮೆ ಗೋಚರತೆ ದಾಖಲಾಗಿರುವ ಬಗ್ಗೆ ಪಾದಚಾರಿಗಳು ಮಾಹಿತಿ ನೀಡಿದ್ದಾರೆ.
ದೆಹಲಿಯನ್ನು ಹೊರತುಪಡಿಸಿದರೆ, ಹರ್ಯಾಣ, ಉತ್ತರ ಪ್ರದೇಶ ಹಾಗೂ ಪಂಜಾಬ್ನಲ್ಲಿ ದಟ್ಟವಾದ ಮಬ್ಬು ಆವರಿಸಿರುವ ಕಾರಣ ಗೋಚರತೆ ಪ್ರಮಾಣ ಕ್ಷೀಣಿಸಿದೆ. ಹರ್ಯಾಣದಲ್ಲಿನ ಹಿಸ್ಸಾರ್ ಹಾಗೂ ಕರ್ನಾಲ್ನಲ್ಲಿ 25 ಮೀಟರ್ ಗೋಚರತೆ ದಾಖಲಾದರೆ ಆಗ್ರಾದಲ್ಲಿನ ಭಾತಿನಾಡ ಹಾಗೂ ಬರೇಲಿಯಲ್ಲಿ ಗೋಚರತೆಯು ಶೂನ್ಯಕ್ಕೆ ಇಳಿದಿದೆ ಎಂದು ಹವಾಮಾನ ಇಲಾಖೆ ಪ್ರಕಟಣೆ ತಿಳಿಸಿದೆ.