ಬೆಂಗಳೂರು ಜ.03: ಅತಿಥಿ ಉಪನ್ಯಾಸಕರ ಸೇವೆ ಕಾಯಮಾತಿಗೆ ಕಾನೂನಿನ ಸಾಕಷ್ಟು ತೊಡಕು ಇರುವುದರಿಂದ ಸೇವೆ ಕಾಯಂ ಮಾಡಲು ಸಾಧ್ಯವಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಸ್ಪಷ್ಟವಾಗಿ ಹೇಳಿದ್ದಾರೆ.
ಈ ನಡುವೆ, ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಪಾದಯಾತ್ರೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಮಂಗಳವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಬಸ್ಪೇಟೆಯಿಂದ ನೆಲಮಂಗಲದವರೆಗೆ ಪಾದಯಾತ್ರೆ ನಡೆಸಿದ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಏತನ್ಮಧ್ಯೆ, ಕೊಪ್ಪಳದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅತಿಥಿ ಉಪನ್ಯಾಸಕರನ್ನು ಕಾಯಮಾತಿ ಮಾಡಿಕೊಳ್ಳಲು ಆಗುವುದಿಲ್ಲ. ಅದಕ್ಕೆ ಕಾನೂನಿನ ತೊಡಕಿದೆ ಎಂದು ಈಗಾಗಲೇ ಅವರಿಗೆ ಹೇಳಿದ್ದೇವೆ. ಆದರೂ ಅವರು ಪಾದಯಾತ್ರೆ ಮಾಡುತ್ತಿದ್ದಾರೆ. ಏನು ಮಾಡೊಕಾಗುತ್ತೆ? ಎಂದಿದ್ದಾರೆ.
ಸಚಿವ ಸುಧಾಕರ್ ಅವರು, ಉಮಾದೇವಿ ಪ್ರಕರಣದ ತೀರ್ಪು ಬಂದ ನಂತರ ಅತಿಥಿ ಉಪನ್ಯಾಸಕರ ಸೇವೆ ಕಾಯಂ ಮಾಡಲು ತೊಡಕು ಉಂಟಾಗಿದೆ. ಈವರೆಗೆ ಯಾವುದೇ ರಾಜ್ಯದಲ್ಲಿ ಸೇವೆ ಕಾಯಂ ಮಾಡಿಲ್ಲ. ಕಾನೂನಿನ ತೊಡಕಿದ್ದರೂ ಕೆಲವರು ಕಾಯಂ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಒಂದು ವೇಳೆ ಕಾಯಂ ಮಾಡಿದರೆ ಸರ್ಕಾರಕ್ಕೆ ನ್ಯಾಯಾಲಯದಲ್ಲಿ ಸಮಸ್ಯೆಯಾಗುತ್ತದೆ. ಅತಿಥಿ ಉಪನ್ಯಾಸಕರು ಬೇರೆ ಬೇರೆ ರಾಜ್ಯಗಳಲ್ಲಿ ಸೇವೆ ಕಾಯಂ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆಯೇ ಹೊರತು ಯಾವುದೇ ದಾಖಲೆ ನೀಡುತ್ತಿಲ್ಲ ಎಂದರು.