ಅಯೋಧ್ಯೆಯಲ್ಲಿ ಜನವರಿ 22ರಂದು ಉದ್ಘಾಟನೆಯಾಗಲಿರುವ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೆ ಕರ್ನಾಟಕದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ನಿರ್ಮಿಸಿರುವ ವಿಗ್ರಹ ಆಯ್ಕೆಯಾಗಿರುವುದಕ್ಕೆ ರಾಜ್ಯದಾದ್ಯಂತ ಸಂಭ್ರಮ ವ್ಯಕ್ತವಾಗಿದೆ. ಈ ಮಧ್ಯೆ, ಅಯೋಧ್ಯೆಯಲ್ಲಿ ಶಿಲ್ಪಿ ಅರುಣ್ ಯೋಗಿರಾಜ್ ಅವರು ಸಹ ಶಿಲ್ಪಿಗಳ ಜತೆಗೂಡಿ ನೃತ್ಯ (Arun Yogiraj Dance) ಮಾಡಿರುವ ವಿಡಿಯೋ ಈಗ ಬಹಿರಂಗವಾಗಿದೆ. ವಿಗ್ರಹ ಆಯ್ಕೆಯಾದ ಖುಷಿಯಲ್ಲಿ ಸಹ ಶಿಲ್ಪಿಗಳೊಂದಿಗೆ ಅರುಣ್ ಯೋಗಿರಾಜ್ ನೃತ್ಯಮಾಡಿದ್ದಾರೆ. ಅರುಣ್ ಅವರನ್ನು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನೆನಪಿನ ಕಾಣಿಕೆಯೊಂದಿಗೆ ಬೀಳ್ಕೊಟ್ಟಿದೆ.
ಅಯೋಧ್ಯೆಯಲ್ಲಿ ಮೂರ್ತಿ ಕೆತ್ತನೆ ಮಾಡಿದ ಬಳಿಕ ಅರುಣ್ ಅವರಿಗೆ ಟ್ರಸ್ಟಿಗಳಿಂದ ಸನ್ಮಾನವಾಗಿತ್ತು. ನೆನಪಿನ ಕಾಣಿಕೆ ಕೊಟ್ಟು ಸನ್ಮಾನಿಸಲಾಗಿತ್ತು. ಅದಾದ ಬಳಿಕ ಎಲ್ಲ ಶಿಲ್ಪಿಗಳ ಜೊತೆ ನೃತ್ಯ ಮಾಡಿ ಅರುಣ್ ಸಂಭ್ರಮಿಸಿದ್ದಾರೆ.
ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ನಿರ್ಮಿಸಿರುವ, ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೆ ಆಯ್ಕೆಯಾಗಿರುವ ವಿಗ್ರಹದ ಚಿತ್ರಗಳನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಂಗಳವಾರ ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಹಂಚಿಕೊಂಡಿದ್ದರು.