ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳಲ್ಲಿ ಲೇಔಟ್, ವಿಲ್ಲಾಗಳನ್ನು ನಿರ್ಮಿಸುತ್ತಿದ್ದ ರಿಯಲ್ ಎಸ್ಟೇಟ್ (Real estate) ಕಂಪನಿಗಳು ಈಗ ಕಾಫಿನಾಡು ಚಿಕ್ಕಮಗಳೂರಿನ (Chikkamagaluru) ಪಶ್ಚಿಮಘಟ್ಟ ಸೂಕ್ಷ್ಮ ಪ್ರದೇಶಗಳಿಗೂ ಕಾಲಿಟ್ಟಿವೆ. ರಾಜ್ಯದ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಕಂಪನಿಗಳು ಭದ್ರಾ ಹುಲಿ ಸಂರಕ್ಷಿತ ಪ್ರದೇಶ (Bhadra tiger reserve forest), ಕಾಡಾನೆಗಳು ಓಡಾಡುವ ಸೂಕ್ಷ್ಮ ಪ್ರದೇಶಗಳಲ್ಲಿ ಲೇಔಟ್ ನಿರ್ಮಾಣ ಮಾಡಲು ಮುಂದಾಗಿವೆ.
ಚಿಕ್ಕಮಗಳೂರು ತಾಲೂಕಿನ ಜಾಗರ ಹೋಬಳಿಯ ಹುಲುವತ್ತಿ ಮತ್ತು ಗೊಣಕಲ್ ಗ್ರಾಮಗಳಲ್ಲಿ 242 ಎಕರೆ ಜಗಾವನ್ನು ತುಂಡು ಭೂಮಿಯಾಗಿ ವಿಭಜಿಸಿ ಲೇಔಟ್ ನಿರ್ಮಿಸಲು ಆರು ಕಂಪನಿಗಳು ತಯಾರಾಗಿವೆ. ಈ ಲೇಔಟ್ಗಳನ್ನು ಹೊರ ರಾಜ್ಯದವರಿಗೆ ಮಾರಾಟ ಮಾಡಲು ಪ್ಲಾನ್ ಮಾಡಿಕೊಂಡಿವೆ. ಕಾಫಿ ಪ್ಲಾಂಟೇಶನ್ ಮಾಡುತ್ತೇವೆ ಎಂದು ಕದ್ದು ಮುಚ್ಚಿ ರಿಯಲ್ ಎಸ್ಟೇಟ್ ದಂಧೆ ನಡೆಸಿವೆ.
ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಮಾಡಲು ಅವಕಾಶ ಇಲ್ಲ. ಮತ್ತು ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಯಾವುದೇ ರಕ್ಷಿತ ಪ್ರದೇಶದ ಗಡಿಯಿಂದ 10 ಕಿಮೀ ವ್ಯಾಪ್ತಿಯು ಪರಿಸರ ಸೂಕ್ಷ್ಮ ಪ್ರದೇಶ. ಆದರೆ ಕಂಪನಿಗಳು ವನ್ಯಜೀವಿ ಕಾಯ್ದೆ ಮತ್ತು ಸುಪ್ರೀಂಕೋರ್ಟ್ ಆದೇಶವನ್ನು ಗಾಳಿಗೆ ತೂರಿ ರಿಯಲ್ ಎಸ್ಟೇಟ್ ನಿರ್ಮಿಸಲು ಕಂಪನಿಗಳು ಮುಂದಾಗಿವೆ.