ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಯನ್ನು ಎದುರಿಸಲು ಸಿದ್ಧತಾ ಕಾರ್ಯ ಆರಂಭಿಸಿದ ಬಿಜೆಪಿ ನಾಯಕರು ಸೋಮವಾರ ಬೆಂಗಳೂರಿನಲ್ಲಿ ಲೋಕಸಭಾ ಚುನಾವಣಾ ಬೈಠೆಕ್ ಸಭೆಯಲ್ಲಿ 100 ದಿನಗಳ ಪ್ರಚಾರದ ರೋಡ್ ಮ್ಯಾಪ್ ಸಿದ್ಧಪಡಿಸಲಾಗಿದೆ. ಜೊತೆಗೆ, ಶೀಘ್ರವೇ ಬಿಜೆಪಿ ಜಿಲ್ಲಾಧ್ಯಕ್ಷರನ್ನು ಘೋಷಣೆ ಮಾಡುವುದು ಹಾಗೂ 28 ಕ್ಷೇತ್ರಗಳಲ್ಲಿಯೂ ಗೆಲ್ಲುವುದರ ಬಗ್ಗೆ ಚರ್ಚಿಸಲಾಗಿದೆ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದರು.
ಬೆಂಗಳೂರಿನಲ್ಲಿ ನಡೆದ ಬಿಜೆಪಿ ನಾಯಕರ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಿಗ್ಗೆಯಿಂದ ಇಡೀ ದಿನ ಯೋಜನಾ ಬೈಠೆಕ್ ಸಭೆ ನಡೆದಿದೆ. ರಾಜ್ಯದಲ್ಲಿ 28ಕ್ಕೆ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲು, ನಿರ್ಣಯಿಸಬೇಕಾದ ರೂಪುರೇಷೆಗಳು, ಯಾವ ವಿಷಯ ಕೈಗೆತ್ತಿಕೊಳ್ಳಬೇಕು, ಸಮನ್ವಯತೆ ಹೇಗೆ ಇರುಬೇಕು ಎಂದು ಚಿಂತನೆ ಮತ್ತು ಚರ್ಚೆ ಮಾಡಿದ್ದೇವೆ. ದೇಶ ಹಾಗೂ ರಾಜ್ಯದ ಜನತೆಗೆ ಮೋದಿ ಗ್ಯಾರಂಟಿಯೇ ಭರವಸೆ. ರಾಜ್ಯದ ಜನರು ಈ ಬಾರಿ ನೂರಕ್ಕೆ ನೂರರಷ್ಟು ಗೆಲ್ಲಿಸುವ ವಿಶ್ವಾಸ ಇದೆ. ಆದ್ದರಿಂದ ಚುನಾವಣಾ ಪ್ರಚಾರಕ್ಕೆ 100 ದಿನಗಳ ರೋಡ್ ಮ್ಯಾಪ್ ತಯಾರಿಸಿದ್ದೇವೆ. ಇದಕ್ಕೆ ಅನುಗುಣವಾಗಿ ನಿರಂತರ ಸಭೆ, ಕಾರ್ಯಚಟುವಟಿಕೆ ಗಳನ್ನು ನಡೆಸುತ್ತೇವೆ ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷರ ಆಯ್ಕೆ ಪಟ್ಟಿ ಶೀಘ್ರ ಘೋಷಣೆ: ಜಿಲ್ಲಾಧ್ಯಕ್ಷರ ಆಯ್ಕೆ ಈಗಾಗಲೇ ಅಭಿಪ್ರಾಯ ಸಂಗ್ರಹ ಆಗಿದೆ. ಶೀಘ್ರವೇ ಘೋಷಣೆ ಆಗಲಿದೆ. 28 ಲೋಕಸಭಾ ಕ್ಷೇತ್ರಗಳ ಕುರಿತು ಹೈಕಮಾಂಡ್ ಗೆ ವರದಿ ಸಲ್ಲಿಕೆ ಮಾಡುವ ಬಗ್ಗೆ ಜನವರಿ 10 ಮತ್ತು ಜ.13 ರಂದು ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಲೋಕಸಭೆ ಅಭ್ಯರ್ಥಿಗಳ ಬಗ್ಗೆ ವರದಿಗಳನ್ನು ಪಡೆದು ಚರ್ಚೆ ಮಾಡಲಾಗುತ್ತದೆ. ಆ ನಂತರ ಅದನ್ನು ವರಿಷ್ಠರಿಗೆ ಕಳುಹಿಸುವ ನಿರ್ಣಯ ಆಗುತ್ತದೆ ಎಂದು ಮಾಜಿ ಸಚಿವ ಸಿ.ಟಿ. ರವಿ ಮಾಹಿತಿ ನೀಡಿದರು.