ಶಿವಮೊಗ್ಗ, ಜ.09: ರಾಜ್ಯದಲ್ಲಿ ಈಗಾಗಲೇ ಅನೇಕ ವಿದ್ಯುತ್ ಅವಘಡಗಳಲ್ಲಿ ಸಾವು ನೋವು ಸಂಭವಿಸಿದೆ. ಆದರೆ ಶಿವಮೊಗ್ಗದಲ್ಲಿ ನಡೆದ ಘಟನೆ ಎಂತವರ ಕಣ್ಣಲ್ಲೂ ನೀರು ತರಿಸುವಂತಿದೆ. ತಾಯಿ ಜೊತೆ ಗದ್ದೆಗೆ ಹೋಗಿದ್ದ ಬಾಲಕನು ವಿದ್ಯುತ್ ಕಂಬದಲ್ಲಿ ನೇತು ಬಿದ್ದ ತಂತಿಯಿಂದ ವಿದ್ಯುತ್ ಶಾಕ್ ಹೊಡೆಸಿಕೊಂಡಿದ್ದಾನೆ. ಈ ಶಾಕ್ ಗೆ ತುತ್ತಾಗಿದ್ದ ವಿಕಲಚೇತನ ಬಾಲಕನ ಕೈ ಮತ್ತು ಕಾಲಿನ ಬೆರಳು ಕಟ್ ಮಾಡಿ ಆಪರೇಷನ್ ಮಾಡಲಾಗಿದೆ. ಬಾಲಕನ ರೋಧನೆ, ತಾಯಿಯ ಅಳಲು ಕಲ್ಲು ಹೃದಯಕ್ಕೂ ಕಣ್ಣೀರು ತರಿಸುವಂತಿದೆ. ಯಾರೋ ಮಾಡಿದ ತಪ್ಪಿಗೆ 11 ವರ್ಷದ ಬಾಲಕನ ಜೀವನಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ವಿದ್ಯುತ್ ಶಾಕ್ ಹೊಡೆತಕ್ಕೆ ಕೈ ಮತ್ತು ಕಾಲಿನ ಮೂರು ಬೆರಳು ಕಳೆದುಕೊಂಡ ಬಾಲಕನ ನೋವಿನ ಕಥೆ ಇಲ್ಲಿದೆ ಓದಿ.
ದೀಲಿಪ್ ಎಂಬ 11 ವರ್ಷದ ದಲಿತ ವಿಕಲಚೇತನ ಬಾಲಕ ಶಿವಮೊಗ್ಗ ಮೆಗ್ಗಾನ್ ಜಿಲ್ಲಾಸ್ಪತ್ರೆಯ ಬೆಡ್ ಮೇಲೆ ಮಲಗಿ ಚಿತ್ರಹಿಂಸೆ ಅನುಭವಿಸುತ್ತಿದ್ದಾನೆ. ದಿಲೀಪ್ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಹೊಸ ಜೋಗ್ ಗ್ರಾಮದ ನಿವಾಸಿ. ಇದೇ ಗ್ರಾಮದಲ್ಲಿ ಡಿ. 3 ರಂದು ತಾಯಿ ಜೊತೆ ಗದ್ದೆಗೆ ಹೋದಾಗ ನೇತು ಬಿದ್ದ ವಿದ್ಯುತ್ ಕಂಬದ ತಂತಿಯಿಂದ ಬಾಲಕನಿಗೆ ಶಾಕ್ ಹೊಡೆದಿತ್ತು. ಈ ಶಾಕ್ ಹೊಡೆದ ಪರಿಣಾಮ ಆತನ ಬಲಗೈ ಮತ್ತು ಎಡಗಾಲಿಗೆ ಗಂಭೀರ ಗಾಯವಾಗಿತ್ತು. ಕೂಡಲೇ ಬಾಲಕನನ್ನು ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಕೈ ಮತ್ತು ಕಾಲಿನ ಮೂರು ಬೆರಳನ್ನು ಉಳಿಸಿಕೊಳ್ಳುವ ವೈದ್ಯರ ಪ್ರಯತ್ನ ವಿಫಲವಾಗಿದೆ. ಗಾಯ ದಿನೇ ದಿನೇ ಹೆಚ್ಚಾಗಿ ಗ್ಯಾಂಗರೀನ್ ಶುರುವಾಗಿತ್ತು. ಈ ಹಿನ್ನಲೆಯಲ್ಲಿ ವೈದ್ಯರು ಡಿ. 6 ರಂದು ಬಲಗೈ ಪೂರ್ಣ ಕಟ್ ಮಾಡಿದ್ದಾರೆ. ಮತ್ತು ಎಡಗಾಲಿನ ಮೂರು ಬೆರಳು ಕಟ್ ಮಾಡಿ ಆಪರೇಷನ್ ಮಾಡಿದ್ದಾರೆ.