ಮೈಸೂರು: ಅಯೋಧ್ಯೆಯಲ್ಲಿ ಉದ್ಘಾಟನೆಗೊಳ್ಳುತ್ತಿರುವ ರಾಮಮಂದಿರ ರಾಜಕೀಯ ಜೂಜಾಟದ ಕೇಂದ್ರ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಅಭಿಪ್ರಾಯಪಟ್ಟರು. ನಗರದ ಅಬ್ದುಲ್ ನಜೀರ್ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಂಸ್ಥೆಯಲ್ಲಿ ಶ್ರಮಣ ಸಂಸ್ಕೃತಿ ಟ್ರಸ್ಟ್ ಮತ್ತು ಬಯಲು ಬಳಗ ಆಯೋಜಿಸಿದ್ದ 90ರ ನಂತರದ ಕರ್ನಾಟಕ ರಾಜ್ಯ ಮಟ್ಟದ ವಿಚಾರ ಕಮಟ 2ನೇ ದಿನದ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಹಳ್ಳಿ ಹಳ್ಳಿಯಲ್ಲಿನ ರಾಮಮಂದಿರಗಳು ಸಾಮಾನ್ಯವಾಗಿ ಜೂಜಾಟದ ಕೇಂದ್ರಗಳು. ಈಗ ಅಯೋಧ್ಯೆಯಲ್ಲಿ ಉದ್ಘಾಟನೆಗೆ ಸಿದ್ಧವಾದ ರಾಮಮಂದಿರವೂ ರಾಜಕಾರಣದ ಜೂಜಾಟದ ಕೇಂದ್ರ.
ಇಂದು ಮೌಲ್ಯ ಮತ್ತು ಅಪಮೌಲ್ಯದ ನಡುವೆ ಘರ್ಷಣೆ ನಡೆಯುತ್ತಿದೆ. ಅಪೂರ್ಣ ರಾಮ ಮಂದಿರ ಉದ್ಘಾಟನೆ ದೇಶದ ಮೆದುಳು ತಿನ್ನುತ್ತಿದೆ. ಸನಾತನಕ್ಕೆ ಮೌಲ್ಯ ಇರುವಂತೆ ಅಪಮೌಲ್ಯಗಳಿವೆ ಎಂದರು. ಸನಾತನ ಎಂಬುದು ಹಿಂದಿನಿಂದ ಬಂದದ್ದು. ಅತಿ ಆಸೆ ಗತಿಕೇಡು ಎಂಬ ಮಾತು ಸನಾತನವಾದದ್ದು. ಗರ್ವಭಂಗ ಇನ್ನೊಂದು ಮಾತು. ಇದು ಆಂಜನೇಯನನ್ನು ಅಲುಗಾಡಿಸಲಾಗದ ಭೀಮ, ಮಗನಿಂದಲೇ ಸೋತ ಅರ್ಜುನ ಇತ್ಯಾದಿ ಉದಾಹರಣೆ ಕೊಡಬಹುದು. ಹಾಗೇಯೇ ಹಿಂದೂ ಅನ್ನುವುದು ಸಹಜ. ಹಿಂದೂತ್ವ ಎನ್ನುವುದು ನಾನತ್ವ ಎಂದು ಅವರು ಬಣ್ಣಿಸಿದರು.
2024ರ ಚುನಾವಣೆಗೂ ಮುನ್ನ ಉದ್ಯೋಗ, ಆರೋಗ್ಯ ಸಹಿತ ಎಲ್ಲವನ್ನೂ ಮೌಲ್ಯಮಾಪನ ಮಾಡಬೇಕು. ಏನನ್ನು ಪೂರೈಸಿದರು ಏನನ್ನೂ ಪೂರೈಸಲಿಲ್ಲ ಚರ್ಚೆಯ ವಿಷಯಗಳಾಗಬೇಕು ಎಂದು ಅವರು ಹೇಳಿದರು. ಎರಡನೇ ದಿನದ 2ನೇ ಗೋಷ್ಠಿಯಲ್ಲಿ ಸಿದ್ದನಗೌಡ ಪಾಟೀಲ- ರಾಜಕೀಯ, ಮಾವಳ್ಳಿ ಶಂಕರ್- ದಲಿತ ಚಳವಳಿ, ಸಬಿಹಾ ಭೂಮಿಗೌಡ- ಮಹಿಳಾ ಚಳವಳಿ, ಬಗಲಪುರ ನಾಗೇಂದ್ರ-ರೈತ ಚಳವಳಿ ವಿಷಯ ಮಂಡಿಸಿದರು. ಬಂಜಗೆರೆ ಜಯಪ್ರಕಾಶ್ ಇದ್ದರು.