ಮಂಡ್ಯ : ಶ್ರೀರಾಮಮಂದಿರ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ರನ್ನೇ ಕರೆದಿಲ್ಲ. ಇದು ಕನ್ನಡಿಗರಿಗೆ ಮಾಡಿದ ಅಪಮಾನ ಅಲ್ವಾ ಎಂದು ಕೃಷಿ ಇಲಾಖೆ ಸಚಿವ ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟದ ಸದಸ್ಯರನ್ನೇ ಪ್ರಧಾನಿ ನರೇಂದ್ರ ಮೋದಿ ಕರೆದಿಲ್ಲ. ಅಪೂರ್ಣ ರಾಮಮಂದಿರ ಉದ್ಘಾಟನೆಗೆ ಅನೇಕ ಮಠಗಳು ವಿರೋಧಿಸಿವೆ. ಲೋಕಸಭೆ ಚುನಾವಣೆಗಾಗಿ ಶ್ರೀರಾಮಮಂದಿರ ಉದ್ಘಾಟಿಸುತ್ತಿದ್ದಾರೆ. ರಾಮಮಂದಿರ ಉದ್ಘಾಟನೆ ನಮಗೂ ಸಂತಸ, ನಾವು ರಾಮಭಕ್ತರೇ. ಚುನಾವಣೆ ದೃಷ್ಟಿಯಿಂದ ಉದ್ಘಾಟನೆ ಮಾಡುವುದು ಹೆಚ್ಚು ದಿನ ನಡೆಯಲ್ಲ. ದೇವರು, ದೇವಸ್ಥಾನ ಇಟ್ಟುಕೊಂಡು ಚುನಾವಣೆ ನಡೆಸಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.