ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊರೋನಾ ವೇಳೆ ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತದಲ್ಲಿ ಒಂದೇ ರಾತ್ರಿ 32 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಆಗಿನ ಸರ್ಕಾರ ಅಲ್ಪ ಸ್ವಲ್ಪ ಪರಿಹಾರ ಕೊಟ್ಟು ಕೈ ತೊಳೆದುಕೊಂಡಿತು. ನಂತರ ಕಾಂಗ್ರೆಸ್, ಆಕ್ಸಿಜನ್ ದುರಂತದಲ್ಲಿ ಸತ್ತಿದ್ದು 24 ಅಲ್ಲ 32 ಮಂದಿಯೆಂದು ಕೆಪಿಸಿಸಿ ವತಿಯಿಂದ ತಲಾ ಒಂದು ಲಕ್ಷ ಪರಿಹಾರ ಕೊಟ್ಟಿತ್ತು.ಇನ್ನು ರಾಜ್ಯದಲ್ಲಿ ನಡೆದ ಭಾರತ್ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಸಂತ್ರಸ್ತರ ಜೊತೆಗೆ ಸಂವಾದ ನಡೆಸಿ ಸರ್ಕಾರಿ ಉದ್ಯೋಗದ ಭರವಸೆ ಕೊಟ್ಟಿದ್ದರು.
ಇದೀಗ ಚಾಮರಾಜನಗರ ಉಸ್ತುವಾರಿ ಸಚಿವ ವೆಂಕಟೇಶ್ ಗಣರಾಜ್ಯೋತ್ಸವ ದಿನದಂದೆ ಗುತ್ತಿಗೆ ಆಧಾರದ ಮೇಲೆಯೇ ಕೆಲಸ ಕೊಡುವ ಘೋಷಣೆ ಮಾಡಿದ್ದಾರೆ. ಜೊತೆಗೆ ಫೆಬ್ರವರಿ 1 ರಿಂದ ಕೆಲಸಕ್ಕೆ ಹಾಜರಾಗುವಂತೆ ಸಂತ್ರಸ್ತ ಕುಟುಂಬದ ಒಬ್ಬ ವ್ಯಕ್ತಿಗೆ ಕೆಲಸ ಕೊಡುವ ಬಗ್ಗೆ ಈಗಾಗ್ಲೇ ಜಿಲ್ಲಾಡಳಿತ ಮಾಹಿತಿ ಸಂಗ್ರಹಿಸಿದೆ.