ಬೆಂಗಳೂರು : ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ವಿವಾದಕ್ಕೆ ಜಿಲ್ಲಾಡಳಿತ ನಡೆದುಕೊಂಡ ರೀತಿಯೇ ಕಾರಣ ಎಂದು ಸಂಸದೆ ಸುಮಲತಾ ಅವರು ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಚ್ಚಳಿಕೆ ವಿರುದ್ಧವಾಗಿ ಏಕೆ ನಡೆದುಕೊಳ್ಳಬೇಕು ಎಂದು ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಟ್ರಸ್ಟ್ ನವರು ಒತ್ತಾಯ ಮಾಡಿದ್ದಕ್ಕೆ ಧ್ವಜಾರೋಹಣಕ್ಕೆ ಅನುಮತಿ ಕೊಟ್ಟಿದ್ದಾರೆ. ರಾಷ್ಟ್ರಧ್ವಜ ಅಥವಾ ಕನ್ನಡ ಧ್ವಜ ಹಾರಿಸಲು ಮಾತ್ರ ಅನುಮತಿ ಕೊಟ್ಟಿದ್ದಾರೆ. ಧರ್ಮ, ಪಕ್ಷದ ಬಾವುಟ ಹಾರಿಸಬಾರದೆಂದು ಸೂಚಿಸಲಾಗಿದೆ. ಅದಾಗ್ಯೂ ಮುಚ್ಚಳಿಕೆ ವಿರುದ್ಧವಾಗಿ ಏಕೆ ನಡೆದುಕೊಳ್ಳಬೇಕು ಎಂದು ಪ್ರಶ್ನಿಸಿದರು. ಅಲ್ಲದೆ, ರಾಜಕೀಯ ಬಳಸಿ, ರಾಜಕೀಯ ಲಾಭ ಪಡೆಯಬೇಕೆಂಬ ಉದ್ದೇಶದಿಂದ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಪ್ರಯತ್ನ ಇದು ಎಂದರು.